ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ಜಾಮೀನು ಪಡೆಯಲು ನಕಲಿ ದಾಖಲೆಗಳನ್ನು ಸಲ್ಲಿಸಿ ಶ್ಯೂರಿಟಿ ನೀಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಜಾಮೀನಿಗಾಗಿ ಶ್ಯೂರಿಟಿ ನೀಡುವವರ ಸಂಪೂರ್ಣ ವಿವರವನ್ನು ಪರಿಶೀಲನೆಗೊಳಪಡಿಸಿ ಖಾತರಿಪಡಿಸಿಕೊಳ್ಳಬೇಕು ಎಂದು ವಿಚಾರಣಾ ನ್ಯಾಯಾಲಯಗಳಿಗೆ ಮಾರ್ಗಸೂಚಿಗಳನ್ನು ನೀಡಿದೆ. ಅಲ್ಲದೆ, ಈ ಸಂಬಂಧ ಅಗತ್ಯವಿರುವ ತಾಂತ್ರಿಕ ನೆರವನ್ನು ಕಂದಾಯ ಇಲಾಖೆ ಹಾಗೂ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ)ಕ್ಕೆ ಸೂಚನೆ ನೀಡಿದೆ.
ಮೃತಪಟ್ಟ ವ್ಯಕ್ತಿಯ ಹೆಸರು, ಆಧಾರ್ ಕಾರ್ಡ್ ಹಾಗೂ ಜಮೀನಿನ ನಕಲಿ ದಾಖಲೆಗಳನ್ನು ನೀಡಿ ಜಾಮೀನು ಪಡೆದಿರುವ ಪ್ರಕರಣ ರದ್ದುಕೋರಿ ಸಂಬಂಧಿಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾ. ಸೂರಜ್ ಗೋವಿಂದರಾಜು ಅವರಿದ್ದ ಪೀಠ ಈ ಮಾರ್ಗಸೂಚಿಗಳನ್ನು ನೀಡಿ ಅರ್ಜಿಯನ್ನು ಇತ್ಯರ್ಥ ಪಡಿಸಿದೆ.
ಅಲ್ಲದೆ, ಈ ಕುರಿತು ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಅವರು ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳ ಅನುಮತಿ ಪಡೆದು ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯಗಳಿಗೆ ಸುತ್ತೋಲೆಗಳನ್ನು ಹೊರಡಿಸಬೇಕು. ನ್ಯಾಯಾಲಯಗಳ ಕಂಪ್ಯೂಟರ್ ವಿಭಾಗದ ರಿಜಿಸ್ಟ್ರಾರ್ ಅವರು ಸೆಂಟ್ರಲ್ ಪ್ರೊಜಕ್ಟ್ಸ್ ಕೋ-ಆರ್ಡಿನೇಟರ್(ಸಿಪಿಸಿ) ಮೂಲಕ ಎಲ್ಲ ಮಾಹಿತಿ ಲಭ್ಯವಾಗುವಂತೆ ಮಾಡಬೇಕು.
ಜತೆಗೆ, ಶ್ಯೂರಿಟಿ ನೀಡುವುದಕ್ಕೆ ನ್ಯಾಯಾಲಯಗಳಿಗೆ ಬರುವವರ ಕುರಿತು ಈ ಹಿಂದೆ ಯಾವುದೇ ಪ್ರಕರಣದಲ್ಲಿ ಶ್ಯೂರಿಟಿ ನೀಡಿದ್ದಾರೆಯೇ? ಎಂಬುದನ್ನು ಪರಿಶೀಲನೆಗೊಳಪಡಿಸಿಬೇಕು. ಅಲ್ಲದೆ, ಶ್ಯೂರಿಟಿಗಾಗಿ ಪದೇ ಪದೆ ಹಾಜರಾಗಿದ್ದಾರೆಯೇ? ಎಂಬುದನ್ನು ಖಾತರಿ ಪಡಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ಸೂಚನೆ ನೀಡಿದೆ.