ಕಲಬುರಗಿ: ಬೀದರ್ ಜಿಲ್ಲೆಯ ಪ್ರವೇಶಕ್ಕೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಆಳಂದ ತಾಲೂಕಿನ ಮಂಠಾಳ ಗ್ರಾಮದ ಬಳಿಯಲ್ಲಿ ಶನಿವಾರ ಮಧ್ಯಾಹ್ನ ಬೀದರ ಜಿಲ್ಲೆಗೆ ಹೊರಟಿದ್ದ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಮತ್ತು ರಾಜ್ಯಾಧ್ಯಕ್ಷ ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ ಅವರನ್ನು ಪೊಲೀಸರು ತಡೆದು ವಾಪಸ್ಸು ಕಳಿಸಿರುವ ಘಟನೆ ನಡೆದಿದೆ.
ಬೀದರನಲ್ಲಿ ಜೂ.4ರಿಂದ 12ರ ವರೆಗೆ ಮೂಲ ಅನುಭವ ಮಂಟಪ ರಕ್ಷಣೆಗಾಗಿ ನಡೆಯುತ್ತಿರುವ “ಮಠಾಧೀಶರ ನಡೆ ಬಸವಕಲ್ಯಾಣದ ಕಡೆ’ ಕಾರ್ಯಕ್ರಮದಲ್ಲಿ ಭಾಗವಹಿಸಲು ಉಭಯ ನಾಯಕರು ಹೊರಟಿದ್ದರು. ಆದರೆ, ಮುನ್ನೆಚ್ಚರಿಕೆ ಕ್ರಮವಾಗಿ ಬೀದರ ಜಿಲ್ಲಾಡಳಿತ ಉಭಯ ನಾಯಕರ ಪ್ರವೇಶವನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಶನಿವಾರ ಆಳಂದದಲ್ಲಿನ ಕಾರ್ಯಕ್ರಮ ಮುಗಿಸಿಕೊಂಡು ಬೀದರಗೆ ಪ್ರಯಾಣ ಬೆಳೆಸಿದಾಗ ವಿ.ಕೆ.ಸಲಗರ ಬಳಿ ಮಂಠಾಳದಲ್ಲಿ ಪೊಲೀಸರು ಉಭಯ ನಾಯಕರನ್ನು ತಡೆದಾಗ ತುಸು ಹೊತ್ತು ವಾದ-ಪ್ರತಿವಾದಗಳು ನಡೆದವು.
ನಾವು ಬಸವಕಲ್ಯಾಣದ ಘನ ರುದ್ರಮುನಿ ಶಿವಾಚಾರ್ಯರ ಭೇಟಿಗೆ ಹೊರಟಿದ್ದೇವೆ. ನಮ್ಮ ಉದ್ದೇಶ ಯಾವ ಕಾರ್ಯಕ್ರಮದಲ್ಲಿಯೂ ಪಾಲ್ಗೊಳ್ಳುವುದು ಅಲ್ಲ ಎಂದು ತಿಳಿಸಿದರೂ ಪೊಲೀಸರು ಯಾವುದೇ ಕಾರಣಕ್ಕೂ ಬೀದರ್ ಜಿಲ್ಲೆಗೆ ಪ್ರವೇಶ ನೀಡಲು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದರು.