ಬೆಳಗಾವಿ: ರಾಜ್ಯದ ವಿವಿಧ ಸಕ್ಕರೆ ಕಾರ್ಖಾನೆಗಳು ₹6 ಸಾವಿರ ಕೋಟಿಗೂ ಹೆಚ್ಚು ಬಾಕಿ ಉಳಿಸಿಕೊಂಡಿವೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.
ಶಾಸಕ ರಮೇಶ ಜಾರಕಿಹೊಳಿ ಅವರ ಸೌಭಾಗ್ಯಲಕ್ಷಿ ಸಕ್ಕರೆ ಕಾರ್ಖಾನೆಯಿಂದ ಹಣ ಬಾಕಿ ಇರುವ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿ ಮಂಗಳವಾರ ಪ್ರತಿಕ್ರಿಯೆ ನೀಡಿದ ಅವರು, ಯಾವೆಲ್ಲ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿವೆಯೋ ಅವುಗಳಿಗೆ ಸಂಬಂಧಿಸಿದವರೆಲ್ಲರಿಗೂ ನೋಟಿಸ್ ಜಾರಿಗೊಳಿಸಲಾಗಿದೆ ಎಂದರು.
ಸಾಲ ಕೊಟ್ಟಿದ್ದು, ಅದನ್ನು ಮರುಪಾವತಿ ಮಾಡಲು ನೋಟಿಸ್ ಕೊಟ್ಟಿದ್ದಾರೆ. ರಮೇಶ ಜಾರಕಿಹೊಳಿ ಮಾತ್ರವಲ್ಲ, ಕಾಂಗ್ರೆಸ್ನ ಲಕ್ಷ್ಮಿ ಹೆಬ್ಬಾಳಕರ, ಜೆಡಿಎಸ್ನ ಬಂಡೆಪ್ಪ ಕಾಂಶಪೂರ ಮೊದಲಾದವರು ಕೂಡ ಬಾಕಿ ಉಳಿಸಿಕೊಂಡಿದ್ದಾರೆ. ಸಕ್ಕರೆ ಕಾರ್ಖಾನೆ ಇರುವ 24 ಜನರು ಸಾಲ ಪಡೆದಿದ್ದಾರೆ. ₹2 ಲಕ್ಷದಿಂದ ₹ ಲಕ್ಷ ಸಾಲ ಕಟ್ಟದಿದ್ದಾಗಲೇ ಸಂಬಂಧಿಸಿದವರ ಮನೆಯನ್ನು ಜಪ್ತಿ ಮಾಡುವುದಿಲ್ಲವೇ? ಹಾಗೆಯೇ ನೂರಾರು ಕೋಟಿ ರೂಪಾಯಿ ಸಾಲ ಪಡೆದಿರುವವರ ವಿರುದ್ದ ಅಪೆಕ್ಸ್ ಬ್ಯಾಂಕ್ನವರು ಕ್ರಮ ಕೈಗೊಂಡಿದ್ದಾರೆ. ವಸೂಲಾತಿಗೆ ಇಲಾಖೆಯಿಂದಲೂ ಸೂಚನೆ ಕೊಡಲಾಗಿದೆ ಎಂದು ತಿಳಿಸಿದರು.
ಕೆಲವರು ಬಡ್ಡಿ ಹಾಗೂ ಅಸಲು ಎರಡನ್ನೂ ಕಟ್ಟಿಲ್ಲ. ಕೆಲವರು ಬಡ್ಡಿಯನ್ನು ನಿಯಮಿತವಾಗಿ ಪಾವತಿಸುತ್ತಿದ್ದಾರೆ. ದಕ್ಷಿಣ ಕನ್ನಡ, ತುಮಕೂರು ಮೊದಲಾದ ಡಿಸಿಸಿ ಬ್ಯಾಂಕ್ಗಳಿಂದ ಸಾಲ ಪಡೆದಿದ್ದಾರೆ. ವಸೂಲಿ ಮಾಡಲು ಗಂಭೀರವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾರದು ಎಷ್ಟು ಕೋಟಿ ರೂಪಾಯಿ ಬಾಕಿ ಇದೆ ಎನ್ನುವುದನ್ನು ಕೂಡ ಸಾರ್ವಜನಿಕ ವೇದಿಕೆಯಲ್ಲಿ ಪ್ರಕಟಿಸಲಾಗುವುದು. ಇದರಲ್ಲಿ ರಾಜಕೀಯವೇನಿಲ್ಲ; ಮುಚ್ಚು ಮರೆಯೂ ಇಲ್ಲ ಎಂದು ಪ್ರತಿಕ್ರಿಯಿಸಿದರು.
ರಾಜ್ಯದಲ್ಲಿ 21 ಡಿಸಿಸಿ ಬ್ಯಾಂಕ್ಗಳಿವೆ. ಗುರಿ ತಲುಪಿವೆಯೇ ಎಂದು ಪ್ರಗತಿ ಪರಿಶೀಲನೆ ನಡೆಸುತ್ತಿದ್ದೇನೆ ಎಂದರು.