ತೀರ್ಥಹಳ್ಳಿ: ಪಿಎಸ್ಐ ಹುದ್ದೆಗಳ ನೇಮಕಾತಿ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಅವರ ಕಾರು ಎರಡು ದಿನ ಗುಡ್ಡೇಕೊಪ್ಪ (ಗೃಹ ಸಚಿವರ ನಿವಾಸವಿರುವ ಗ್ರಾಮ) ದಲ್ಲಿ ಇತ್ತು. ಅವರ ಜತೆ ಗೃಹಸಚಿವರು ನೇರ ಸಂಪರ್ಕ ಹೊಂದಿದ್ದರು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಗಂಭೀರ ಆರೋಪ ಮಾಡಿದ್ದಾರೆ.
ಗೃಹ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಗುಡ್ಡೇಕೊಪ್ಪದಿಂದ ಶಿವಮೊಗ್ಗದವರೆಗೆ ಹಮ್ಮಿಕೊಂಡಿರುವ ನಾಲ್ಕು ದಿನಗಳ ಪಾದಯಾತ್ರೆಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಕಿಮ್ಮನೆ ರತ್ನಾಕರ್, ಪಿಎಸ್ಐ ಹುದ್ದೆ ಹಗರಣದಲ್ಲಿ ತೀರ್ಥಹಳ್ಳಿ ಕ್ಷೇತ್ರದ ಒಂದಿಬ್ಬರು ಭಾಗಿಯಾಗಿರುವ ಶಂಕೆ ಇದೆ. ಗೃಹ ಸಚಿವರ ಮೇಲೇ ಆರೋಪವಿರುವ ಕಾರಣ ಅವರ ವಿರುದ್ಧ ಯಾರೂ ಸಾಕ್ಷಿ ಹೇಳೋಕೆ ಮುಂದೆ ಬರಲ್ಲ. ನಿಷ್ಪಕ್ಷ ತನಿಖೆ ನಡೆಯಬೇಕೆಂದರೆ ಗೃಹ ಸಚಿವರು ಈ ಕೂಡಲೇ ರಾಜೀನಾಮೆ ನೀಡಿ ಸಂಪುಟದಿಂದ ಹೊರಬರಬೇಕು ಎಂದು ಆಗ್ರಹಿಸಿದರು.