ಮುಖ್ಯೋಪಾಧ್ಯಾಯ ಫಕ್ಕೀರಪ್ಪ ಬಾಲಹನುಮಣ್ಣನವರ ವಿರುದ್ಧ ಶಾಲೆಗೆ ಸರಿಯಾಗಿ ಬರುವುದಿಲ್ಲ ಹಾಗೂ ಶಾಲೆಗೆ ಮದ್ಯಪಾನ ಮಾಡಿ ಬರುತ್ತಾರೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಸಮಯಕ್ಕೆ ಸರಿಯಾಗಿ ಶಾಲೆಗೆ ಬಾರದೆ ಮನಸ್ಸೋ ಇಚ್ಛೆ ಶಾಲೆಗೆ ಬರುವ ಇಂತಹ ಮುಖ್ಯೋಪಾಧ್ಯಾಯರು ನಮ್ಮ ಶಾಲೆಗೆ ಬೇಡ ಎಂದು ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದಾರೆ.
ಕೆಲವು ವರ್ಷಗಳಿಂದ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿರುವ ಫಕ್ಕೀರಪ್ಪ ಬಾಲಹನುಮಣ್ಣನವರ ಅವರನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಬಂದು ಅಮಾನತ್ತು ಅಥವಾ ವರ್ಗಾವಣೆಯ ಆದೇಶ ನೀಡಬೇಕು ಅಲ್ಲಿಯವರೆಗೂ ನಾವು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಆಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಮೈಸೂರು: 75 ಲಕ್ಷ ರೂಪಾಯಿ ಮೌಲ್ಯದ ಮನೆ ಮುಡಾ ವಶಕ್ಕೆ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು 75 ಲಕ್ಷ ರೂಪಾಯಿ ಮೌಲ್ಯದ ಮನೆ ವಶಪಡಿಸಿಕೊಂಡಿದೆ. ಆರ್ಥಿಕ ದುರ್ಬಲ ವರ್ಗದವರಿಗೆ ನಿರ್ಮಿಸಲಾಗಿದ್ದ ಮನೆಯಲ್ಲಿ 15 ವರ್ಷಗಳಿಂದ ಕುಮಾರ್ ಅನಧಿಕೃತವಾಗಿ ವಾಸವಾಗಿದ್ದಾರೆ. ಅಲ್ಲದೇ ರಾಮಕೃಷ್ಣನಗರ ಇ ಬ್ಲಾಕ್ ಬಡಾವಣೆಯ ಎಂಐಜಿ ಮನೆಯನ್ನು ರಘು ಎಂಬುವವರಿಗೆ 8 ಸಾವಿರ ರೂಪಾಯಿಗೆ ಬಾಡಿಗೆಗೆ ನೀಡಿದ್ದರು. ಹೀಗಾಗಿ ಈ ವಿಷಯ ತಿಳಿಯುತ್ತಿದ್ದಂತೆ ಸರಸ್ವತಿಪುರಂ ಪೊಲೀಸರ ಸಹಕಾರದಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಮನೆ ವಶಕ್ಕೆ ಪಡೆದಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಡಿ.ಬಿ.ನಟೇಶ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ.