ಬೆಂಗಳೂರು,ಡಿ.31- ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರನ್ನು ಇಂದು ಸಂಜೆ ಅಥವಾ ಯಾವುದೇ ಕ್ಷಣದಲ್ಲಿ ವರ್ಗಾವಣೆಗೊಳಿಸಲಿದ್ದು, ನಾಳೆ ನಗರಕ್ಕೆ ಹೊಸ ಕಮೀಷನರ್ ನೇಮಕವಾಗಲಿದ್ದಾರೆ.
ತೆರವಾಗಲಿರುವ ಆಯುಕ್ತರ ಹುದ್ದೆಗೆ ಮೂವರು ಹಿರಿಯ ಅಧಿಕಾರಿಗಳು ಕಣ್ಣಿಟ್ಟಿದ್ದು, ಅದೃಷ್ಟ ಯಾರಿಗೆ ಒಲಿದಲಿದೆ ಎಂಬುದು ಕೂತಹೂಲ ಮೂಡಿಸಿದೆ.
ಹಾಲಿ ನಗರ ಪೊಲೀಸ್ ಆಯುಕ್ತರಾಗಿರುವ ಕಮಲ್ ಪಂಥ್ ಅವರಿಗೆ ಮುಂಬಡ್ತಿ ನೀಡಲಾಗಿದ್ದು, ಮೂಲಗಳ ಪ್ರಕಾರ ಅವರಿಗೆ ಕೆಎಸ್ಆರ್ಪಿ ಘಟಕಕ್ಕೆ ವರ್ಗಾವಣೆ ಮಾಡುವ ಸಾಧ್ಯತೆಯಿದೆ. ಇನ್ನು ನಗರ ಪೊಲೀಸ್ ಆಯುಕ್ತ ಹುದ್ದೆಗೆ ಗುಪ್ತಚರ ವಿಭಾಗದ ಮುಖ್ಯಸ್ಥ ದಯಾನಂದ್, ಕೆಎಸ್ಆರ್ಪಿ ಎಡಿಜಿಪಿ ಅಲೋಕ್ ಕುಮಾರ್ ಹಾಗೂ ಸಿಐಡಿ ಘಟಕದ ಎಡಿಜಿಪಿ ಉಮೇಶ್ಕುಮಾರ್ ಅವರ ಹೆಸರುಗಳು ಕೇಳಿಬಂದಿವೆ.
ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವ ಅರಗ ಜ್ಞಾನೇಂದ್ರ ಸೇರಿದಂತೆ ಮತ್ತಿತರ ಅಧಿಕಾರಿಗಳ ಜೊತೆ ಚರ್ಚಿಸಿ
ಬೆಂಗಳೂರು ನಗರಕ್ಕೆ ಯಾರನ್ನು ಆಯುಕ್ತರನ್ನಾಗಿ ಮಾಡಬೇಕೆಂಬ ಚರ್ಚೆ ನಡೆಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಗುಪ್ತಚರ ವಿಭಾಗದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿರುವ ದಯಾನಂದ್ ಅವರ ಹೆಸರನ್ನು ನೂತನ ಪೊಲೀಸ್ ಆಯುಕ್ತರ ಹುದ್ದೆಗೆ ರಾಜ್ಯ ಸರ್ಕಾರ ಪರಿಗಣಿಸಿದೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಅವರಿಗೆ ಬೆಂಬಲವನ್ನು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಅಲೋಕ್ ಕುಮಾರ್ ಹಾಗೂ ಉಮೇಶ್ಕುಮಾರ್ ಅವರುಗಳಿಗೆ ಸಂಘ ಪರಿವಾರದ ನಾಯಕರು ಬೆಂಬಲ ನೀಡಿದ್ದು, ದೆಹಲಿ ನಾಯಕರಿಂದಲೂ ಲಾಬಿ ನಡೆದಿದೆ. ಆದರೆ ಇಂಥ ಮಹತ್ವದ ಹುದ್ದೆಗೆ ಆಡಳಿತದಲ್ಲಿ ಸಾಕಷ್ಟು ಅನುಭವ ಇರಬೇಕು ಎಂಬ ಕಾರಣಕ್ಕಾಗಿ ಕೊನೆ ಕ್ಷಣದಲ್ಲಿ ದಯಾನಂದ್ ಅವರಿಗೆ ಸರ್ಕಾರ ಮಣೆ ಹಾಕಿದರೂ ಅಚ್ಚರಿ ಇಲ್ಲ.
ಕೆಲ ತಿಂಗಳ ಹಿಂದೆಯೇ ಕಮಲ್ ಪಂಥ್ ವರ್ಗಾವಣೆಗೊಳ್ಳ ಬೇಕಿತ್ತು. ಆದರೆ ಯಡಿಯೂರಪ್ಪ ಅವರ ಬೆಂಬಲ ಇದ್ದುದ್ದರಿಂದ ಅವರು ಈವರೆಗೂ ಮುಂದುವರೆದಿದ್ದರು. ಈಗ ಸರ್ಕಾರ ಅವರನ್ನು ವರ್ಗಾವಣೆಗೊಳಿಸಿ ಹೊಸ ಆಯುಕ್ತರನ್ನು ನೇಮಕ ಮಾಡಲು ಮುಂದಾಗಿದೆ.