ಧಾರವಾಡ: ಇಲ್ಲಿಯ ಕಸಬಾಗೌಡರ ಓಣಿಯ ಶ್ರೀ ದ್ಯಾಮವ್ವ-ದುರ್ಗವ್ವ ದೇವಸ್ಥಾನದ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ಶತಮಾನದ ಬಳಿಕ ಶುಕ್ರವಾರ ಜರುಗಿತು. ಈ ಜಾತ್ರೆಯು ಇದಕ್ಕೂ ಮುನ್ನ 1899ರಲ್ಲಿ ನಡೆದಿತ್ತು. ಬಳಿಕ ಹರಿಜಾತ್ರೆ ನಡೆದಿದ್ದು, ಬಿಟ್ಟರೆ ಇದೀಗ ಬರೋಬ್ಬರಿ 122 ವರ್ಷಗಳ ಬಳಿಕ ನೂತನ ರಥೋತ್ಸವ ಸಾವಿರಾರು ಭಕ್ತರ ಹರ್ಷೋದ್ಘಾರದ ಮಧ್ಯೆ ಸಾಗಿತು.
ರಥೋತ್ಸವಕ್ಕೆ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಹಿರೇಮಠದ ಗದಿಗಯ್ಯ ಸ್ವಾಮೀಜಿ ಹಾಗೂ ಶಾಸಕ ಅಮೃತ ದೇಸಾಯಿ ಚಾಲನೆ ನೀಡಿದರು.ದೇವಸ್ಥಾನದಿಂದ ಆರಂಭಗೊಂಡ ದ್ಯಾಮವ್ವ-ದುರ್ಗವ್ವ ಪ್ರತಿಷ್ಠಾಪಿಸಿದ್ದ ರಥೋತ್ಸವವು ಸಂಚರಿಸಿದ ಮಾರ್ಗಗಳೆಲ್ಲವೂ ಭಂಡಾರದಿಂದ ಮಿಂದೆದ್ದವು. ಭಕ್ತರಂತೂ ದೇವಿಯರ ಜಯಘೋಷಣೆಗಳ ಮಧ್ಯೆ ಭಕ್ತಿಯಿಂದ ಭಂಡಾರದಲ್ಲಿ ಮಿಂದೆದ್ದರು. ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ದಾರಿ ಉದ್ದಕ್ಕೂ ದೇವಿಯರ ಮೂರ್ತಿಗಳಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಕಾಮನಕಟ್ಟಿ, ರವಿವಾರ ಪೇಟೆ, ಶ್ರೀನಗರೇಶ್ವರ ದೇವಸ್ಥಾನ, ಶ್ರೀ ಕಾಳಮ್ಮ ದೇವಸ್ಥಾನ, ಮಟ್ಟಿ ಪರಪ್ಪನಕೂಟದ ಮಾರ್ಗವಾಗಿ ಮಹಾರಥೋತ್ಸವವು ರಾತ್ರಿ ಹೊತ್ತಿಗೆ ದೇವಸ್ಥಾನಕ್ಕೆ ಮರಳಿ ಸಂಪನ್ನಗೊಂಡಿತು. ವಿವಿಧ ಜಾನಪದ ಕಲಾವಿದರು ಹಾಗೂ ಮಜಲಿನ ಕಲಾ ತಂಡಗಳ ಪ್ರದರ್ಶನಗಳು ಗಮನ ಸೆಳೆದವು.