ಕ್ಷೇತ್ರ ಮಟ್ಟದಲ್ಲಿ ಬೆಳೆ ಹಾನಿ ಸಮೀಕ್ಷೆ ನಡೆಸುವಾಗ ರೈತರೊಂದಿಗೆ ಸರ್ಕಾರವಿದೆ, ಕೃಷಿ ಇಲಾಖೆ ಇದೆ ಎಂಬ ಭಾವನೆಯನ್ನು ಮೂಡಿಸಿ ರೈತರಲ್ಲಿ ಆತ್ಮಸ್ಥೈರ್ಯ ಗಟ್ಟಿಗೊಳಿಸಲು ಅಧಿಕಾರಿಗಳು ಮುಂದಾಗಬೇಕೆಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
ಅಕಾಲಿಕ ಮಳೆಯಿಂದ ಬೆಳೆ ನಷ್ಟವಾದ ಬಗ್ಗೆ ಕೃಷಿ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಬೆಳೆ ಸಮೀಕ್ಷೆ ನಡೆಸುವ ನಿಟ್ಟಿನಲ್ಲಿ ಇಂದು ಕೃಷಿ ಇಲಾಖೆಯ ಸಮ್ಮೇಳನ ಸಭಾಂಗಣದಲ್ಲಿ ಕೃಷಿ ಇಲಾಖಾ ಕೇಂದ್ರ ಕಚೇರಿ ಅಧಿಕಾರಿಗಳೊಂದಿಗೆ ಜಿಲ್ಲೆಯ ಕೃಷಿ ಅಧಿಕಾರಿಗಳ ವಿಡಿಯೋ ಸಂವಾದ ನಡೆಸಿ ಪ್ರಗತಿ ಪರಿಶೀಲನೆ ನಡೆಸಿದರು.
ಬೆಳೆ ನಷ್ಟದ ಸಮೀಕ್ಷೆ ನಡೆಸಿದ ದಿನವೇ ಬೆಳೆ ಪರಿಹಾರ ಆಪ್ ನಲ್ಲಿ ವಿವರಗಳನ್ನು ನೋಂದಾಯಿಸಬೇಕು. ಜಿಲ್ಲಾಧಿಕಾರಿಗಳ ಜೊತೆ ಬೆಳೆ ವಿಮಾ ಕಂಪನಿಗಳ ಸಭೆ ಮಾಡಿ ಬೆಳೆ ವಿಮೆ ನೋಂದಾಯಿಸಿದ ರೈತರಿಗೆ ವಿಮಾ ಕಂಪನಿ ಆದಷ್ಟು ಬೇಗ ಪರಿಹಾರ ಧನ ಮಂಜೂರು ಮಾಡಿಸುವಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಎಲ್ಲಕ್ಕಿಂತಲೂ ಪ್ರಮುಖವಾಗಿ ಅಕಾಲಿಕ ಮಳೆಯಿಂದ ಬೆಳೆ ನಷ್ಟದಿಂದ ನೊಂದಿರುವ ರೈತರಿಗೆ ಆತ್ಮಸ್ಥೈರ್ಯ ತುಂಬಿ ಸರ್ಕಾರ ರೈತರ ಬೆನ್ನಿಗಿದೆ ಎಂಬ ಧೈರ್ಯ ನೀಡಬೇಕು ಎಂದು ಸೂಚಿಸಿದರು.