ಬಾಗಲಕೋಟೆ: ಬಾದಾಮಿ ಪಟ್ಟಣದಲ್ಲಿ ಮಂಗಲ ಭವನ ಉದ್ಘಾಟನೆಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ(Siddaramaiah) ಮುಂದೆ ಮುಖ್ಯಮಂತ್ರಿ ಆಗುತ್ತೀರಿ ಎಂದು ಸ್ವಾಮೀಜಿಗಳು ಭವಿಷ್ಯ ನುಡಿದಿದ್ದಾರೆ.ಮಂಗಲ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ದ ರಾಜಯೋಗಿಂದ್ರ ಸ್ವಾಮೀಜಿ, ಬಾಗಲಕೋಟೆ ಜಿಲ್ಲೆ ಸಿದ್ದನಕೊಳ್ಳದ ಡಾ.ಶಿವಕುಮಾರ ಸ್ವಾಮೀಜಿ, ವಿಜಯಪುರ ಜಿಲ್ಲೆ ಕೊಲ್ಹಾರದ ದಿಗಂಬರೇಶ್ವರ ಮಠದ ಕಲ್ಲಿನಾಥ ಸ್ವಾಮೀಜಿಗಳು ಸೇರಿದಂತೆ ಇನ್ನೂ ಕೆಲವು ಸ್ವಾಮೀಜಿಗಳು ಸಿದ್ದರಾಮಯ್ಯ ಸಿಎಂ ಆಗಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ ಮೂರು ಸಾವಿರ ಮಠದ ಗುರುಸಿದ್ದ ರಾಜಯೋಗೇಂದ್ರ ಸ್ವಾಮೀಜಿ ಕಾರ್ಯಕ್ರಮದಲ್ಲಿ ಮಾತನಾಡಿ, ಸಿದ್ದರಾಮಯ್ಯ ಕರ್ನಾಟಕದ ಶ್ರೇಷ್ಠ ಜನನಾಯಕ, ಅವರು ಒಳ್ಳೆಯ ಸಂಸದೀಯ ಪಟು, ಸಾರ್ವಜನಿಕರಲ್ಲಿ ಶ್ರೇಷ್ಠ ವಾಗ್ಮಿ ಆಗಿದ್ದಾರೆ ಎಂದು ಹಾಡಿ ಹೊಗಳಿದ್ರು. ಅಲ್ಲದೇ ವಿಧಾನಸೌಧ ಸುಂದರವಾಗಿ ಕಾಣಲು ಅಲ್ಲಿ ಸಿದ್ದರಾಮಯ್ಯ ಇರಬೇಕು, ಸಿದ್ದರಾಮಯ್ಯ ಇಲ್ಲದ ವಿಧಾನಸೌಧ ನೋಡಲು ಆಗಲ್ಲ ಎಂದರು. ಸಿದ್ದರಾಮಯ್ಯ ಉಸಿರು ಇರುವ ತನಕ ಅವರು ನಾಡಿನ ನಾಯಕರಾಗಿ ಸೇವೆ ಸಲ್ಲಿಸುವ ಭಾಗ್ಯ ಅವರದಾಗಬೇಕು. ಬಾದಾಮಿ ಕ್ಷೇತ್ರದ ಜನರು ಸಿದ್ದರಾಮಯ್ಯ ಅವರನ್ನು ಎಂದಿಗೂ ಕೈ ಬಿಡಬಾರದು ಎಂದು ಹೇಳಿದರು.
ಸಿದ್ದನಕೊಳ್ಳದ ಶಿವಕುಮಾರ ಸ್ವಾಮೀಜಿ ಮಾತನಾಡ್ತಾ, ಸಿದ್ದರಾಮಯ್ಯ ಅವರಿಗೆ ಈ ಹಿಂದೆಯೇ ಆಶೀರ್ವಾದ ಮಾಡಿದ್ದೇನೆ, ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ತಾರೆ, ಹಣ ಗಳಿಸುವ ಜನರು ಸಾವಿರಾರು ಜನ ಇರ್ತಾರೆ. ಆದ್ರೆ, ಹೃದಯ ಗೆಲ್ಲುವ ಜನನಾಯಕ ಅಂದ್ರೆ ಸಿದ್ದರಾಮಯ್ಯ. ಇವರು ಮುಂದಿನ ಸಲ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ ಎಂದು ಆಶೀರ್ವಾದ ರೂಪದಲ್ಲಿ ತಾವೇ ಸಿದ್ದರಾಮಯ್ಯಗೆ ಹಣ ನೀಡಿದರು. ಹಣ ಪಡೆದುಕೊಂಡ ಸಿದ್ದರಾಮಯ್ಯನವರು, ಸ್ವಾಮೀಜಿ ಕೂಟ್ಟ ಹಣವನ್ನು ತಮ್ಮ ಜೇಬಿನಲ್ಲಿ ಹಾಕಿಕೊಂಡರು.
ಸಿದ್ದರಾಮಯ್ಯ ಅವರಿಗೆ ಮಠದ ಪರವಾಗಿ 500 ರೂ. ಕಾಣಿಕೆ ಕೊಟ್ಟು ಶಿವಕುಮಾರ ಸ್ವಾಮೀಜಿ ಆಶೀರ್ವಾದ ಮಾಡಿ, ಮುಂದೆ ಮುಖ್ಯಮಂತ್ರಿ ಆಗುತ್ತೀರಿ ಎಂದು ಭವಿಷ್ಯ ನುಡಿದರು. ಕಲ್ಲಿನಾಥ ಸ್ವಾಮೀಜಿ ಮಾತನಾಡುತ್ತಾ, ಸಿದ್ದರಾಮಯ್ಯ ಶಾಸಕರಾದ ಬಳಿಕ ಬಾದಾಮಿ ಅಭಿವೃದ್ದಿ ಆಗಿದೆ, ಇಲ್ಲಿನ ಪ್ರತಿಯೊಬ್ಬ ರೈತರು ಅವ್ರನ್ನ ಸ್ಮರಿಸುತ್ತಿದ್ದಾರೆ. ಸಿದ್ದರಾಮಯ್ಯ ಬಂದ ಮೇಲೆ ಮಲಪ್ರಭಾ ನದಿಯಲ್ಲಿ ನೀರು ಬರ್ತಿದೆ, ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಿದೆ ಎಂದ್ರು.
ಬಾದಾಮಿ ಕ್ಷೇತ್ರದ ವೈಭವ ಪ್ರಾರಂಭವಾಗಿದೆ, ಮುಂದಿನ ಸಲ ಸಿದ್ದರಾಮಯ್ಯ ಅವರು ಮತ್ತೆ ಬಾದಾಮಿ ಶಾಸಕರಾಗುವುದು, ಮುಖ್ಯಮಂತ್ರಿ ಆಗುವುದು, ಸೂರ್ಯ ಉದಯ ಆಗುವುದು ಎಷ್ಟು ಸತ್ಯವೋ ಇದು ಕೂಡ ಅಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಂದಿನ ಸಿಎಂ ಸಿದ್ದರಾಮಯ್ಯ ಎನ್ನುತ್ತಲೇ, ಅಭಿಮಾನಿಗಳ ಕೇಕೆ ಶಿಳ್ಳೆ ಮುಗಿಲು ಮುಟ್ಟಿತ್ತು.