ಹೈದರಾಬಾದ್: ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಆತ್ಮಹತ್ಯೆಗೆ ಶರಣಾಗಿರುವುದಾಗಿ ಗುರುವಾರ ವರದಿಯಾಗಿದೆ. ಆರೋಪಿಯ ಮೃತದೇಹವು ಘಣಪುರ್ ರೈಲ್ವೆ ಹಳಿಯ ಮೇಲೆ ಪತ್ತೆಯಾಗಿದ್ದು, ಪೊಲೀಸರು ಈ ಬಗ್ಗೆ ಮಾಹಿತಿಯನ್ನು ಖಚಿತಪಡಿಸಬೇಕಿದೆ.
ಆರೋಪಿಯನ್ನು ಪಲ್ಲಕೊಂಡ ರಾಜು (30) ಎಂದು ಗುರುತಿಸಲಾಗಿದೆ. ಸೆಪ್ಟೆಂಬರ್ 9ರಂದು 6 ವರ್ಷದ ಬಾಲಕಿ ಸೈದಾಬಾದ್ನ ಸಿಂಗ್ರೌಣಿ ಕಾಲನಿಯಲ್ಲಿರುವ ತನ್ನ ನಿವಾಸದಿಂದ ನಾಪತ್ತೆಯಾಗಿದ್ದಳು. ಮರುದಿನ ಆಕೆಯ ಮೃತದೇಹವು ಬೆಡ್ಶೀಟ್ನಲ್ಲಿ ಸುತ್ತಿಟ್ಟಿದ್ದ ಸ್ಥಿತಿಯಲ್ಲಿ ನೆರೆಯ ಮನೆಯಲ್ಲೇ ಪತ್ತೆಯಾಗಿತ್ತು. ಇದಾದ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು. ಆಕೆಯ ಮೇಲೆ ಕಾಮುಕ ಅಟ್ಟಹಾಸ ನಡೆಸಿ ಕೊಲೆ ಮಾಡಿದ್ದ. ಇದಾದ ಬಳಿಕ ಆರೋಪಿ ಪರಾರಿಯಾಗಿದ್ದ.
ಬಾಲಕಿ ಮೇಲೆ ಅತ್ಯಾಚಾರಗೈದ ಆರೋಪಿಯ ಸಂಹಾರಕ್ಕೆ ದೇಶಾದ್ಯಂತ ಆಗ್ರಹಗಳು ಕೇಳಿಬರುತ್ತಿತ್ತು. ಬಂಧನವಾದ ಕೂಡಲೇ ಆತನನ್ನು ಎನ್ಕೌಂಟರ್ ಮಾಡುವಂತೆ ತೆಲಂಗಾಣ ಕಾರ್ಮಿಕ ಸಚಿವ ಮಲ್ಲ ರೆಡ್ಡಿ ಒತ್ತಾಯಿಸಿದ್ದರು. ಇದರ ನಡುವೆ ಆರೋಪಿಯ ಸುಳಿವು ನೀಡಿದವರಿಗೆ ಸೈಬರಾಬಾದ್ ಪೊಲೀಸರು 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದರು. ಅಲ್ಲದೆ, ಆತನ ಫೋಟೋವನ್ನು ಸಹ ಬಿಡುಗಡೆ ಮಾಡಲಾಗಿತ್ತು. ಆದರೆ, ಇದೀಗ ಆರೋಪಿ ಭಯದಿಂದಲೋ? ಅಥವಾ ಪಾಪಪ್ರಜ್ಞೆಯಿಂದಲೋ ಆತ್ಮಹತ್ಯೆ ಹಾದಿ ಹಿಡಿದಿದ್ದಾನೆ.
ಅನೇಕ ರಾಜಕಾರಣಿಗಳು, ಕಾರ್ಯಕರ್ತರು ಮತ್ತು ಸಿನಿಮಾ ಕಲಾವಿದರು ಈ ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿ ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದರು.