ವಿಜಯಪುರ: ಮೂವರು ಹೆಂಡಿರು, ಮೂರು ಮೂರು ಸೊಸೆಯಂದಿರನ್ನಿಟ್ಟುಕೊಂಡಿರುವ ರಾಜು ತಾಳಿಕೋಟಿಗೆ ನನ್ನ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ, ಅವನೊಬ್ಬ ಬಕೆಟ್ ಕಲಾವಿದ, ಕಲಿಯುಗದ ಕುಡುಕ ಸ್ಕ್ರಿಪ್ಟ್ ಸಹ ಕದ್ದು ಕ್ಯಾಸೆಟ್ ಮಾಡಿದವ ಎಂದು ಅವನ ಅಳಿಯ ಶೇಕ್ಹುಸೇನ ಮೋದಿ ಆರೋಪಿಸಿದ್ದಾರೆ.
ಕಲಿಯುಗದ ಕುಡುಕ ಸ್ಕ್ರಿಪ್ಟ್ ರಾಜು ತಾಳಿಕೋಟಿ ಬರೆದಿದ್ದು ಅಲ್ಲ. ಪಾಪ ಅದನ್ನು ಯಾರೋ ಬರೆದದ್ದು, ಅದನ್ನಿಟ್ಟುಕೊಂಡು ಈತ ಕ್ಯಾಸೆಟ್ ಮಾಡಿದ. ಇದೀಗ ನನಗೆ ದೊಡ್ಡ ದೊಡ್ಡ ನಿರ್ಮಾಪಕರು ಗೊತ್ತಿದ್ದಾರೆನ್ನುವ ಮೂಲಕ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾನೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾನು ಗನ್ ತೋರಿಸಿಲ್ಲ
ರಾಜು ತಾಳಿಕೋಟಿಗೆ ನಾನು ಗನ್ ತೋರಿಸಿಲ್ಲ. ನನ್ನ ಹತ್ತಿರ ಗನ್ ಇಲ್ಲ. ಬದಲಾಗಿ 0.32 ರಿವಾಲ್ವ ರ್ ಇದ್ದು, ಪರವಾನಗಿ ಹೊಂದಿದ್ದೇನೆ. ನಾನೊಬ್ಬ ರೈತನ ಮಗನಾದ್ದರಿಂದ ಸರ್ಕಾರದಿಂದಲೇ ಅಧಿಕೃತ ಪರವಾನಗಿ ಪಡೆದು ಇರಿಸಿಕೊಂಡಿದ್ದೇನೆ. ಆದರೆ, ನಾನು ಗನ್ ತೋರಿಸಿ ಬೆದರಿಕೆ ಹಾಕಿದ್ದಾಗಿ ರಾಜು ತಾಳಿಕೋಟಿ ಸುಳ್ಳು ಹೇಳುತ್ತಿದ್ದಾರೆ. ಈ ಬಗ್ಗೆ ಯಾವುದೇ ತನಿಖೆಗೆ ನಾನು ಸಿದ್ಧ ಎಂದರು.
ನನ್ನ ಪತ್ನಿಯ ತಂಗಿ ಸನಾಳ ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ಸುಖಾಸುಮ್ಮನೆ ಪ್ರಕರಣದಲ್ಲಿ ನನ್ನ ಹೆಸರು ಎಳೆದು ತರಲಾಗಿದೆ. ನಾನೊಬ್ಬ ರೌಡಿ ಎಂದು ರಾಜು ತಾಳಿಕೋಟಿ ಆರೋಪಿಸಿದ್ದಾನೆ. ಆದರೆ, ನನ್ನ ಮೇಲಾಗಲಿ, ನನ್ನ ಕುಟುಂಬಸ್ಥರ ಮೇಲಾಗಲಿ ಈವರೆಗೂ ಯಾವುದೇ ಒಂದು ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿಲ್ಲ ಎಂದ ಅವರು, ನಾನು ಹಲ್ಲೆ ಮಾಡಿದ್ದೇನೆಂದು ಸುಳ್ಳು ಹೇಳುವ ರಾಜು ತಾಳಿಕೋಟಿ ಘಟನೆ ನಡೆದ 12 ಗಂಟೆ ನಂತರ ಆಸ್ಪತ್ರೆಗೆ ದಾಖಲಾಗಲು ಕಾರಣವೇನು? ಎಂದು ಪ್ರಶ್ನಿಸಿದರು.
ನಾನು ತಪ್ಪಿತಸ್ಥನಾಗಿದ್ದರೆ ಕ್ರಮ ಆಗಲಿ. ಗಲಾಟೆಗೆ ಸಂಬಂಧಿಸಿದ ಸಿಸಿ ಟಿವಿ ದೃಶ್ಯಗಳಿವೆ, ಪೊಲೀಸರು ಪರಿಶೀಲಿಸಲಿ. ಅದನ್ನು ಬಿಟ್ಟು ಸುಳ್ಳು ಆರೋಪ ಮಾಡಿ ನನ್ನ ಮನಸ್ಸಿಗೆ ನೋವು ಮಾಡಬಾರದು ಎಂದರು.
ಶೇಕ್ಹುಸೇನ ಮೋದಿ ಮಡದಿ ಫರೀದಾ ಮಾತನಾಡಿ, ಸನಾ ನನ್ನ ತಂಗಿ. ರಾಜು ನನ್ನ ದೊಡ್ಡಪ್ಪ. ಸನಾ ಮದುವೆ ಆಗಿ ಮೂರು ವರ್ಷ ಆಯಿತು. ಗಂಡ ಹೆಂಡತಿ ಮಧ್ಯೆ ಜಗಳ ನಡೆದಿದೆ. ಮನೆಯವರೆಲ್ಲರೂ ನನಗೆ ಕಿರುಕುಳ ಕೊಡುತ್ತಿದ್ದಾರೆಂದು ಸನಾ ಹೇಳುತ್ತಿದ್ದಳು. ಇದೀಗ ಆಕೆ ಸಾವಿನ ದವಡೆಯಲ್ಲಿದ್ದಾಳೆ ಎಂದರು.
ಈ ಹಿಂದೆಯೂ ಸಾಕಷ್ಟು ಬಾರಿ ಜಗಳ ಆಗಿತ್ತು. ಮಹಾಲಿಂಗಪುರ, ಮುಧೋಳದಲ್ಲಿ ಜಗಳ ಆಗಿ ದೂರು ನೀಡಲು ಪೊಲೀಸ್ ಠಾಣೆಗೆ ಹೋದಾಗ ಸರಿಪಡಿಸಿಕೊಳ್ಳುವುದಾಗಿ ಹೇಳಿದರು. ಇದೇ ರಾಜು ತಾಳಿಕೋಟಿ ಜವಾಬ್ದಾರಿ ಮೇಲೆ ಕಳುಹಿಸಿಕೊಟ್ಟರೆ ಹೀಗೆ ಮಾಡೋದಾ? ಎಂದು ಪ್ರಶ್ನಿಸಿದರು.
ನನ್ನ ಗಂಡನ ಮೇಲೆ ವೃಥಾ ಆರೋಪ ಸಲ್ಲದು. ಇದೇ ರೀತಿ ಆರೋಪ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ರಾಜು ತಾಳಿಕೋಟಿಯೇ ಪ್ರಮುಖ ಕಾರಣರಾಗುತ್ತಾರೆ ಎಂದರು.