ಬೆಂಗಳೂರು: ರಾಜ್ಯದಲ್ಲಿ 339 ಮಂದಿ ಅಫ್ಘಾನಿಸ್ತಾನದ ಪ್ರಜೆಗಳಿದ್ದಾರೆ. ಈ ಪೈಕಿ 192 ಮಂದಿ ವಿದ್ಯಾರ್ಥಿಗಳಿದ್ದಾರೆ. ಅಫ್ಘಾನ್ ಘಟನೆ ಸಂಬಂಧ ಯಾರು ಭಯ ಪಡುವ ಅಗತ್ಯವಿಲ್ಲ. ಮಾನವೀಯ ನೆಲೆಯಲ್ಲಿ ರಾಜ್ಯ ಸರ್ಕಾರ ನೆರವಿಗೆ ಬರಲಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.
ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಸಿಎಆರ್ ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ನಗರ ಪೊಲೀಸರು ಪತ್ತೆ ಮಾಡಿದ 36 ಕೋಟಿ ರೂ. ಮೌಲ್ಯದ ಕಳವು ಮಾಲುಗಳ ಪ್ರದರ್ಶನ ಮತ್ತು ಮಾಲೀಕರಿಗೆ ಹಿಂದಿರುಗಿಸುವ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೆಲವು ವಿದ್ಯಾರ್ಥಿಗಳು ಮತ್ತು ಪ್ರಜೆಗಳ ವೀಸಾ, ಪಾಸ್ ಪೋರ್ಟ್ ಅವಧಿ ಮುಕ್ತಾಯಗೊಂಡಿದೆ. ಇನ್ನು ಕೆಲವರದ್ದು ಮುಕ್ತಾಯದ ಸಮೀಪಿಸುತ್ತಿದೆ. ಅಂತಹವರು ಹೆದರುವ ಅಗತ್ಯವಿಲ್ಲ. ತೊಂದರೆಯಾದರೆ ಕೂಡಲೇ ಸಮೀಪದ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ. ರಾಜ್ಯ ಸರ್ಕಾರ ಅಫ್ಘಾನ್ ಪ್ರಜೆಗಳ ನೆರವಿಗೆ ಬರಲಿದೆ. ಇನ್ನು ಪಾಸ್ ಪೋರ್ಟ್, ವೀಸಾ ಕುರಿತು ಕೇಂದ್ರ ಸರ್ಕಾರದ ಜತೆ ಚರ್ಚಿಸಲಿದೆ ಎಂದು ಹೇಳಿದರು.