ಹಾವೇರಿ: ವಾಯುವ್ಯ ಸಾರಿಗೆ ಇಲಾಖೆಯಲ್ಲಿ ಆಗಾಗ ಒಂದಿಲ್ಲೊಂದು ಅವಾಂತರಗಳು ನಡೆಯುವಂತೆ, ಈಗ ಟಿಕೆಟ್ ದರದ ಮತ್ತೊಂದು ಅವಾಂತರ ಬೆಳಕಿಗೆ ಬಂದಿದೆ.
ಒಂದು ಊರಿನಿಂದ ಮತ್ತೊಂದು ಊರಿಗೆ ಹೋದ್ರೆ ಒಂದು ದರವಿದ್ದರೇ, ಹೋದ ಊರಿನಿಂದ ಮರಳಿ ಬಂದರೆ ಹೆಚ್ಚಿನ ದರವನ್ನು ಪ್ರಯಾಣಿಕರಿಂದ ವಸೂಲಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಆ. 10 ರಂದು ಪ್ರಯಾಣಿಕನೋರ್ವ ಮಧ್ಯಾಹ್ನ 2.22 ಗಂಟೆಗೆ ಕಾಗಿನೆಲ್ಲಿಯಿಂದ ಹತ್ತಿರದ ಮುತ್ತೂರಿಗೆ ತೆರಳುವ ಸಮಯದಲ್ಲಿ ಹಾವೇರಿ ಘಟಕಕ್ಕೆ ಸೇರಿದ ವಾಯುವ್ಯ ಸಾರಿಗೆಯ ಎಕ್ಸಸ್ಪ್ರೆಸ್ ಬಸ್ ನಲ್ಲಿ ಹೋದಂತ ಸಮಯದಲ್ಲಿ ನಿರ್ವಾಹಕ 10 ರೂ. ಪಡೆದುಕೊಂಡು ಟಿಕೆಟ್ ನೀಡಿದ್ದಾರೆ.
ಅದೇ, ವ್ಯಕ್ತಿ ಪುನಃ ಆ. 11 ರಂದು ಬೆಳಿಗ್ಗೆ 10.17 ರ ಸಮಯದಲ್ಲಿ ಬ್ಯಾಡಗಿ ತಾಲೂಕಿನ ಮುತ್ತೂರು ಗ್ರಾಮದಿಂದ ಹತ್ತಿರದ ಕಾಗಿನೆಲ್ಲಿ ಬರುವಾಗ ಹಿರೇಕೆರೂರು ಘಟಕದ ವಾಯುವ್ಯ ಸಾರಿಗೆಗೆ ಸೇರಿದ ಎಕ್ಸಸ್ಪ್ರೆಸ್ ಬಸ್ ನಲ್ಲಿ ಪ್ರಯಾಣ ಮಾಡುವಾಗ ಆ ಬಸ್ ನ ನಿರ್ವಾಹಕ 17 ರೂ. ಟಿಕೆಟ್ ನೀಡಿ ಪ್ರಯಾಣಿಕನಿಗೆ ದಂಗು ಬಡಿಸಿದ್ದಾರೆ.
ಹೆಚ್ಚಿನ ದರ ಪಡೆದುಕೊಂಡ ಬಗ್ಗೆ ನಿರ್ವಾಹಕನೊಂದಿಗೆ ಪ್ರಯಾಣಿಕ ವಾಗ್ವಾದ ಮಾಡಿಕೊಂಡು ಕಾಗಿನೆಲ್ಲಿಗೆ ತಲುಪಿದ್ದಾನೆ. ಇದರ ಬಗ್ಗೆ ಸೂಕ್ತ ಸ್ಪಷ್ಟನೆಯನ್ನು ನಿರ್ವಾಹಕ ನೀಡದಿದ್ದಾಗ. ಅದೇ ಬಸ್ ನಲ್ಲಿ ಪ್ರಯಾಣ ಮುಂದುವರೆಸಿಕೊಂಡು ಹಾವೇರಿ ಬಂದಿರುವ ಪ್ರಯಾಣಿಕ ಬಸ್ ನಿಲ್ದಾಣದಲ್ಲಿ ದರದ ವ್ಯತ್ಯಾಸದ ಬಗ್ಗೆ ಪ್ರಶ್ನಿಸಿದ್ದಾಗ ಬಸ್ ನಿಲ್ದಾಣದಲ್ಲಿನ ಕಂಟ್ರೋಲರ್ ಗಳು ಇದು ಹಿರೇಕೆರೂರು ಘಟಕದ ಸಮಸ್ಯೆ. ಇದನ್ನು ಆ ಬಸ್ ನಿರ್ವಾಹಕರು, ಅಲ್ಲಿನ ಸಿಬ್ಬಂದಿಗಳು ಸರಿಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಈ ಕುರಿತು ಪ್ರಯಾಣಿಕ ಪ್ರಕಾಶ ‘ಉದಯನಾಡು’ ಪತ್ರಿಕೆಯೊಂದಿಗೆ ಮಾತನಾಡಿ, ಹೋಗುವಾಗ 10 ರೂ ನೀಡಿ ಟಿಕೆಟ್ ಪಡೆದುಕೊಂಡಿದ್ದೇ, ಬರುವಾಗ 17 ರೂ ಪಡೆದುಕೊಂಡಿದ್ದು ಖಂಡನೀಯ. ಸಾರಿಗೆ ಇಲಾಖೆ ಟಿಕೆಟ್ ದರದಲ್ಲಿ ತಾರತಮ್ಯ ಮಾಡುವ ಮೂಲಕ ಸಾಮಾನ್ಯ ಜನರಿಂದ ಹಗಲು ದರೋಡೆಗೆ ನಿಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.