ಬೆಂಗಳೂರು: ಕೊರೊನಾ ಮಧ್ಯೆ ರೈತ ಕಷ್ಟಪಟ್ಟು ಬೆಳೆದಿದ್ದ ಬಾಳೆಗೊನೆ ಕಳ್ಳತನವಾಗಿದ್ದು, ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಭಟ್ಟರಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಕಷ್ಟಪಟ್ಟು ಬೆಳೆದಿದ್ದ ಬೆಳೆ ಕಳ್ಳನ ಪಾಲಾಗಿದೆ. ಕಳ್ಳರ ಕರಾಮತ್ತು ತೋಟದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗ್ರಾಮದ ರಾಮಕೃಷ್ಣಪ್ಪ ತೋಟದಲ್ಲಿ ಕಳ್ಳತನವಾಗಿದ್ದು, ಸುಮಾರು 25 ಬಾಳೆಗೊನೆ ಕಳ್ಳತನವಾಗಿದೆ.
ಈ ಹಿಂದೆಯೂ ಸಹ ಸಾಕಷ್ಟು ಬಾರಿ ತೋಟದಲ್ಲಿ ಕಳ್ಳತನ ಪ್ರಕರಣಗಳು ನಡೆಯುತ್ತಿತ್ತು. ಇದರಿಂದ ಬೇಸತ್ತ ರೈತ ಕಳ್ಳರನ್ನ ಕಂಡು ಹಿಡಿಯಲು ತೋಟಕ್ಕೆ ಸಿಸಿಟಿವಿಗಳನ್ನ ಅಳವಡಿಸಿದ್ದರು.
ಕಳೆದ ರಾತ್ರಿ ತೋಟಕ್ಕೆ ನುಗ್ಗಿದ ಕಳ್ಳ ಬಾಳೆ ಗೊನೆಗಳನ್ನ ಕದ್ದು ಸಾಗಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರಿಂದ ಪೊಲೀಸರಿಗೆ ಕಳ್ಳನ ಪತ್ತೆಗೆ ಸಿಸಿಟಿವಿಯ ದೃಶ್ಯ ಸಹಕಾರವಾಗಲಿದೆ. ಸದ್ಯ ರೈತ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.