ಬೆಳಗಾವಿಯ ಖಾಸಗಿ ಹೋಟೆಲ್ ಒಂದು ಬಿರಿಯಾನಿ ಜಾಹೀರಾತಿನಲ್ಲಿ ಹಿಂದೂ ಸಂತರಿಗೆ ಅಪಮಾನ ಮಾಡಿದ ಆರೋಪ ಕೇಳಿಬಂದಿದೆ. ಈ ಸಂಬಂಧ ವಿಶ್ವ ಹಿಂದೂ ಪರಿಷತ್, ಬಜರಂಗದಳ ಸಂಘಟನೆಗಳು ಪೊಲೀಸರಿಗೆ ದೂರು ನೀಡಿವೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ವಿಕ್ರಂ ಆಮ್ಟೆ ಅವರಿಗೆ ದೂರು ಸಲ್ಲಿಕೆಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಹೋಟೆಲ್ ಬಂದ್ ಮಾಡಲಾಗಿದ್ದು, ಸ್ಥಳಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಜಾಹಿರಾತು ವಿವಾದ ಸೃಷ್ಟಿಸುತ್ತಿದ್ದಂತೆಯೇ ಪೋಸ್ಟ್ ಡಿಲೀಟ್ ಮಾಡಿ, ಹೊಟೆಲ್ ಕ್ಷಮೆಯಾಚಿಸಿದೆ.
ಬೆಳಗಾವಿಯ ಬಸ್ ನಿಲ್ದಾಣ ಬಳಿ ಇರುವ ಖಾಸಗಿ ಹೋಟೆಲ್ ಒಂದು ಹಿಂದೂ ಸಂತರಿಗೆ ಅಪಮಾನವಾಗುವ ರೀತಿ ಇನ್ಸ್ಟಾಗ್ರಾಮ್ನಲ್ಲಿ ಜಾಹಿರಾತು ಪೋಸ್ಟ್ ಮಾಡಲಾಗಿದೆ ಎಂಬುದು ಹಿಂದೂ ಸಂಘಟನೆಗಳ ಆರೋಪ. ಜಾಹಿರಾತಿನಲ್ಲಿ ಸೇಕ್ರೆಡ್ ಗೇಮ್ಸ್ ಸೀಸನ್ 2 ವೆಬ್ ಸಿರೀಸ್ನ ಗುರೂಜಿ ಪಾತ್ರದ ಚಿತ್ರ ಬಳಸಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಲಾಗಿತ್ತು. ಇದಕ್ಕೆ ಬೆಳಗಾವಿಯ ಖಾಸಗಿ ಹೋಟೆಲ್ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಭುಗಿಲೆದ್ದ ಕಾರಣ, ಪೋಸ್ಟ್ ಡಿಲೀಟ್ ಮಾಡಿ ಕ್ಷಮೆಯಾಚಿಸಲಾಗಿದೆ. ಪ್ರಕರಣದ ಕುರಿತು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳ ಸಂಘಟನೆಗಳು ಪೊಲೀಸರಿಗೆ ದೂರು ನೀಡಿವೆ.