ಮಂಗಳೂರು: ಕಂಬಳ ಕ್ಷೇತ್ರದ ಹಿರಿಯ ಭೀಷ್ಮ, ಕೃಷಿಕ, ಸರಳಜೀವಿ ಕೆದುಬರಿ ಗುರುವಪ್ಪ ಪೂಜಾರಿ (78) ಭಾನುವಾರ ಸಂಜೆ ಮಂಗಳೂರಿನ ಗುರುಪುರ ಸಮೀಪದ ಕುಕ್ಕುದಕಟ್ಟೆ ಬಳಿ ರಸ್ತೆ ಅಪಘಾತದಲ್ಲಿ ನಿಧನರಾದರು.
ಕುಕ್ಕುದಕಟ್ಟೆಯಲ್ಲಿರುವ ಡೈರಿಗೆ ಹಾಲು ಹಾಕಲು ತನ್ನ ಸ್ಕೂಟಿಯಲ್ಲಿ ಸಾಗುತ್ತಿದ್ದ ವೇಳೆ ಕಾರು ಹಾಗೂ ಸ್ಕೂಟಿ ಮಧ್ಯೆ ಈ ಅಪಘಾತ ಸಂಭವಿಸಿದ್ದು, ಗಂಭೀರ ಗಾಯಗೊಂಡ ಅವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಮೃತರು ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಕಂಬಳ ಪ್ರೇಮಿಗಳನ್ನು ಅಗಲಿದ್ದಾರೆ.
ಗುರುಪುರ ಕೆದುಬರಿ ಗುರುವಪ್ಪ ಎಂದೇ ಖ್ಯಾತಿಯಾಗಿದ್ದ ಇವರು, ಮೂಲತಃ ಕೃಷಿಕರು. ಕೃಷಿ ಜೊತೆ ಕೋಣಗಳನ್ನು ಸಾಕುವುದು, ಕಂಬಳಗಳಲ್ಲಿ ಭಾಗವಹಿಸುವುದು ಅವರ ಹವ್ಯಾಸ ಆಗಿತ್ತು. ಅನೇಕ ಕಂಬಳಗಳಲ್ಲಿ ಪದಕ, ಗೌರವಗಳನ್ನೂ ಪಡೆದಿದ್ದಾರೆ. ಅಪಘಾತದ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.