ತುಮಕೂರು: ಗೃಹ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆ ತರಲು ಪ್ರಯತ್ನ ಪಡುತ್ತೇನೆ ಎಂದು ನೂತನ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ.
ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೃಹ ಇಲಾಖೆ ಜವಾಬ್ದಾರಿ ನನಗೆ ಹೊಸದು. ನಾಳೆ ಇಲಾಖೆಯ ಅಧಿಕಾರಿಗಳ ಸಭೆ ನಡೆಸುತ್ತೆನೆ. ಆ ಮೂಲಕ ಅಧಿಕೃತವಾಗಿ ಚಾರ್ಜ್ ತೆಗೆದುಕೊಳ್ಳುತ್ತೇನೆ ಎಂದರು.
ಪೊಲೀಸ್ ಇಲಾಖೆ ಸಶಕ್ತವಾಗಿ ಕೆಲಸ ಮಾಡುವ ಹಾಗೆ ಶಕ್ತಿ ತುಂಬಬೇಕೆಂದು ಯೋಚನೆ ಮಾಡಿದ್ದು, ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಇಲಾಖೆಯಲ್ಲಿ ಇಷ್ಟು ವರ್ಷ ತರಲಾಗದೇ ಇದ್ದ ಏನಾದರೊಂದು ಬದಲಾವಣೆ ತರಲು ಪ್ರಯತ್ನ ಮಾಡುತ್ತೇನೆ. ಜೊತೆಗೆ ಔರಾದ್ಕರ್ ವರದಿ ಅಧ್ಯಯನ ಮಾಡಿ ಪೊಲೀಸರಿಗೆ ಅನುಕೂಲವಾಗುವ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲು ಪ್ರಯತ್ನ ಪಡುತ್ತೆನೆ ಎಂದು ಭರವಸೆ ನೀಡಿದರು.