ಬನಹಟ್ಟಿ : ಮಹಾರಾಷ್ಟ್ರ ರಾಜ್ಯದಲ್ಲಿನ ಹಾಗೂ ಪಶ್ಚಿಮ ಘಟ್ಟಗಳಲ್ಲಿನ ಮಹಾಮಳೆಯ ಪರಿಣಾಮ ಉಂಟಾದ ಪ್ರವಾಹದಿಂದಾಗಿ ಕಳೆದ 13 ದಿನಗಳಿಂದ ಕೃಷ್ಣಾನದಿ ಹಾಗೂ ಘಟಪ್ರಭಾ ನದಿಯು ಉಕ್ಕಿ ಹರಿದ ಪರಿಣಾಮ ರಬಕವಿ-ಬನಹಟ್ಟಿ ತಾಲೂಕಿನ ನದಿಪಾತ್ರದ ಗ್ರಾಮಗಳು ಜಲಾವೃತವಾಗಿ ಸಾಕಷ್ಟು ಆವಾಂತರಗಳನ್ನು ಸೃಷ್ಠಿಸಿತ್ತು.
ಕಳೆದ 3-4 ದಿನಗಳಿಂದ ಕೃಷ್ಣಾ ಹಾಗೂ ಘಟಪ್ರಭಾ ಎರಡು ನದಿಗಳ ನೀರಿನ ಪ್ರಮಾಣ ನದಿಯ ನೀರಿನ ಹರಿವು ಕಡಿಮೆಯಾಗುತ್ತಿದೆ. ಮುಚ್ಚಿಕೊಂಡ ಬಹುತೇಕ ಸೇತುವೆ ಹಾಗೂ ರಸ್ತೆಗಳು ಸಂಚಾರಕ್ಕೆ ಮುಕ್ತವಾಗಿವೆ. ಆದರೆ ಜಲಾವೃತವಾಗಿರುವ ಕಬ್ಬು ನಾಶವಾಗಿ ರೈತರು ಕಣ್ಣಿರು ಸುರಿಸುವಂತಾಗಿದೆ.
ನದಿ ಪಾತ್ರದಲ್ಲಿನ ಗ್ರಾಮಗಳು ಹಾಗೂ ರೈತರ ಬೆಳೆಗಳು ಪ್ರವಾಹ ಪರಿಣಾಮ ಎದುರಿಸುತ್ತಿರುವದರ ಜೊತೆಗೆ ಎರಡು ವರ್ಷದಿಂದ ಕೋವಿಡ್ ಲಾಕಡೌನ್ನಿಂದ ರೈತರ ಪರಿಸ್ಥಿತಿಯು ಬಹಳ ಗಂಭೀರವಾಗಿದೆ ಎಂಬುವದು ನದಿಪಾತ್ರದ ಗ್ರಾಮಗಳ ರೈತರ ಅಳಲಾಗಿದೆ. ಅಲ್ಲದೇ ಹಿನ್ನೀರು ಹಿಂದೆ ಸರಿದಿದ್ದರಿಂದ ನೀರಿನಿಂದ ಜಲಾವೃತವಾದ ಪ್ರದೇಶ ಕೊಳೆತು ನಾರುತ್ತಿದೆ. ಆಪ್ರದೇಶದಲ್ಲಿ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
4 ಲಕ್ಷ ಕ್ಯೂಸೆಕ್ಸ್ ದಾಟಿದ್ದ ಕೃಷ್ಣಾ ನದಿ ನೀರು ಇಂದು ಬುಧವಾರ ಹಿಪ್ಪರಗಿ ಜಲಾಶಯಕ್ಕೆ 1 ಲಕ್ಷ 78 ಸಾವಿರ ಕ್ಯೂಸೆಕ್ಸ್ ವರೆಗೆ ಬಂದು ನಿಂತಿದ್ದು, ಜಲಾಶಯದಿಂದ 1 ಲಕ್ಷ 77 ಸಾವಿರ ಕ್ಯೂಸೆಕ್ಸ್ ನೀರನ್ನು ಮುಂಭಾಗಕ್ಕೆ ಬೀಡಲಾಗುತ್ತಿದೆ. ಹಿಪ್ಪರಗಿ ಜಲಾಶಯದ ನೀರಿನ ಮಟ್ಟ 524.20 ಮೀ ಇದೆ ಎಂದು ರಬಕವಿ-ಬನಹಟ್ಟಿ ತಹಶೀಲ್ದಾರ ಸಂಜಯ ಇಂಗಳೆ ತಿಳಿಸಿದ್ದಾರೆ.
ತಾಲೂಕಿನ ಘಟಪ್ರಭಾ ಪ್ರವಾಹದಿಂದ ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯ ಗಡಿಗ್ರಾಮಗಳ ಸಂಪರ್ಕ ಪುನ: ಕಲ್ಪಿಸುವ ರಬಕವಿ-ಜಾಂಬೋಟಿ ರಾಜ್ಯ ಹೆದ್ದಾರಿ, ತೇರದಾಳ-ಹಳಿಂಗಳಿ, ಮದನಮಟ್ಟಿ-ಅಸ್ಕಿ, ರಬಕವಿ-ಮದನಮಟ್ಟಿ-ಹಳಿಂಗಳಿ ರಸ್ತೆ, ಕುಲಹಳ್ಳಿ ಹಿಪ್ಪರಗಿ ತೋಟದರಸ್ತೆ, ಕುಲಹಳ್ಳಿ -ಗೊಂಬಿಗುಡ್ಡ -ಅಸ್ಕಿ ರಸ್ತೆಗಳು ಹಾಗೂ ರಬಕವಿ ಬನಹಟ್ಟಿ ಜಾಕವೆಲ್ಗೆ ಹೋಗುವ ರಸ್ತೆ ಕೂಡಾ ಸಂಚಾರಕ್ಕೆ ಮುಕ್ತವಾಗಿವೆ. ಇದರಿಂದ ಸಾರ್ವಜನಿಕರಿಗೆ ಮತಷ್ಟು ಅನುಕೂಲವಾಗಿದೆ.