ಬೆಂಗಳೂರು, ಆ. 31 : ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹಿರಿಯ ರಾಜಕಾರಣಿಗಳ ಹಾಗೂ ಪೊಲೀಸ್ ಅಧಿಕಾರಿಗಳ ಪೋನ್ ಕದ್ದಾಲಿಕೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಟೆಲಿನೋನ್ ಕದ್ದಾಲಿಕೆ ಪ್ರಕರಣದಲ್ಲಿ ಸಿಬಿಐ ಬಿ ವರದಿ ಸಲ್ಲಿಸಿದ್ದು, ಇದಕ್ಕೆ ಅಕ್ಷೇಪಣೆ ವ್ಯಕ್ತಪಡಿಸಿ ರೈಲ್ವೇ ಎಡಿಜಿಪಿ ಭಾಸ್ಕರರಾವ್ ಅವರು ಸಿಬಿಐ ವಿಶೇಷ ನ್ಯಾಯಲಯಕ್ಕೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದಾರೆ. ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳ ನಡುವಿನ “ಟೆಲಿಪೋನ್ ಕದ್ದಾಲಿಕೆ ಪ್ರಕರಣ” ಗುದ್ದಾಟ ಮತ್ತೆ ಬೀದಿಗೆ ಬಂದಿದೆ.
ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ , ಕೆಲವು ಅಧಿಕಾರಿಗಳ ಪೋನ್ ಕದ್ದಾಲಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಐಪಿಎಸ್ ಅಧಿಕಾರಿ ಭಾಸ್ಕರರಾವ್ ಒಬ್ಬ ಆರೋಪಿ ಜತೆ ಮಾತನಾಡುವುದನ್ನು ಕದ್ದಾಲಿಸಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಕದ್ದಾಲಿಕೆಯ ಅಡಿಯೋ ತುಣುಕನ್ನು ಪತ್ರಕರ್ತೆಯ ಕೈ ತಲುಪಿ ಅದು ಬಹಿರಂಗವಾಗಿತ್ತು. ಇದು ರಾಷ್ಟ್ರ ಮಟ್ಟದ ಸುದ್ದಿಯಾಗಿತ್ತು. ಹಿರಿಯ ಐಪಿಎಸ್ ಅಧಿಕಾರಿಗಳಾದ ಭಾಸ್ಕರರಾವ್ ಮತ್ತು ಅಲೋಕ್ ಕುಮಾರ್ ನಡುವಿನ ಗುದ್ದಾಟಕ್ಕೆ ಕಾರಣವಾಗಿತ್ತು. ಪ್ರಕರಣ ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಂಡ ಬಳಿಕ ಸಿಬಿಐ ತನಿಖೆಗೆ ವಹಿಸಲಾಗಿತ್ತು.
ಅಡಿಯೋ ಲೀಕ್ ಮತ್ತು ಪೋನ್ ಕದ್ದಾಲಿಕೆ ಕುರಿತು ಎಫ್ಐಆರ್ ದಾಖಲಿಸಿದ್ದ ಸಿಬಿಐ ಪೊಲೀಸರು ಮಂಗಳವಾರ ಬಿ ವರದಿ ಸಲ್ಲಿಸಿದ್ದಾರೆ. ಆಡಿಯೋ ಲೀಕಾಗಿದ್ದರ ಬಗ್ಗೆ ಮಾತ್ರ ಬಿ ರಿಪೋರ್ಟ್ ಸಲ್ಲಿಸಲಾಗಿದೆ. ಐಟಿ ಹಾಗೂ ಟೆಲಿಪೋನ್ ಕಾಯ್ದೆ ಅಡಿ ತನಿಖೆ ನಡೆಸಿರುವ ಸಿಬಿಐ ಅಧಿಕಾರಿಗಳು ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಇನ್ನು ಇತರೆ ರಾಜಕಾರಣಿಗಳು ಹಾಗೂ ಮಠದ ಸ್ವಾಮೀಜಿಗಳ ಪೋನ್ ಕದ್ದಾಲಿಕೆ ಕುರಿತು ಸಿಬಿಐ ಸರ್ಕಾರಕ್ಕೆ ವರದಿ ಸಲ್ಲಿಸಬೇಕಿದೆ.
ಪೋನ್ ಕದ್ದಾಲಿಕೆ ಮತ್ತು ಅಡಿಯೋ ಲೀಕ್ ಬಗ್ಗೆ ಸಿಬಿಐ ಸಲ್ಲಿಸಿರುವ ಬಿ ವರದಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ರೈಲ್ವೇ ವಿಭಾಗದ ಎಡಿಜಿಪಿ ಭಾಸ್ಕರರಾವ್, ಪ್ರಕರಣದ ಬಗ್ಗೆ ಪ್ರಮುಖ ಸಾಕ್ಷಿಗಳನ್ನು ನಾನು ಕೊಟ್ಟಿದ್ದೇನೆ. ಸೂಕ್ತ ತನಿಖೆ ಮಾಡದೇ ಬಿ ವರದಿ ಸಲ್ಲಿಸಲಾಗಿದೆ. ಪ್ರಮುಖ ಸಾಕ್ಷಾಧಾರಗಳಿದ್ದರು ಅದನ್ನು ಸಿಬಿಐ ಪರಿಗಣಿಸಿಲ್ಲ. ಹೀಗಾಗಿ ಈ ಪ್ರಕರಣವನ್ನು ಮರು ತನಿಖೆ ಮಾಡಬೇಕು ಎಂದು ಕೋರಿ ಪ್ರೊಟೆಸ್ಟ್ ಅರ್ಜಿಯನ್ನು ಭಾಸ್ಕರರಾವ್ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಭಾಸ್ಕರರಾವ್ ಅರ್ಜಿಯನ್ನು ಸಿಬಿಐ ವಿಶೇಷ ನ್ಯಾಯಾಲಯ ಮಾನ್ಯ ಮಾಡಿದೆ.
ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಭಾಸ್ಕರಾವ್, ಇಬ್ಬರ ವಿರುದ್ಧ ಗಂಭೀರ ಸಾಕ್ಷಿಗಳಿವೆ. ಆದರೂ ಕೇಸನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಲಾಗುತ್ತಿದೆ. ಸಿಬಿಐ ಸಲ್ಲಿಸುತ್ತಿರುವ ಬಿ ವರದಿ ಆಕ್ಷೇಪಿಸಿ ಪ್ರೊಟೆಸ್ಟ್ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದೇನೆ ಎಂದರು. ಮರು ತನಿಖೆ ಮಾಡುವಂತೆ ಕೋರಿ ನಾನು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಅದನ್ನು ನ್ಯಾಯಾಲಯ ಮಾನ್ಯ ಮಾಡಿದೆ. ಹೀಗಾಗಿ ತಪ್ಪಿಸ್ಥರ ವಿರುದ್ಧ ಮರು ತನಿಖೆ ಮಾಡಬೇಕು ಎಂದು ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಮತ್ತು ಪತ್ರಕರ್ತೆ ಖುಶಾಲ ವಿರುದ್ಧ ಭಾಸ್ಕರರಾವ್ ಗಂಭೀರ ನೇರ ಆರೋಪ ಮಾಡಿದ್ದಾರೆ.
ಕದ್ದಾಲಿಕೆ ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ ?: ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಇಂಜಾಜ್ ಚಿಟ್ ಫಂಡ್ ಸಂಸ್ಥೆ ವಿರುದ್ಧ ವಂಚನೆ ಪ್ರಕರಣ ದಾಖಲಾಗಿತ್ತು. ಕೇಸನ್ನು ಸಿಸಿಬಿ ಪೊಲೀಸರ ತನಿಖೆಗೆ ವಹಿಸಿ ಅಂದಿನ ನಗರ ಪೊಲೀಸ್ ಆಯುಕ್ತರಾಗಿದ್ದ ಟಿ. ಸುನೀಲ್ ಕುಮಾರ್ ಆದೇಶಿಸಿದ್ದರು. ಇಂಜಾಜ್ ಚಿಟ್ ಫಂಡ್ ಸಂಸ್ಥೆಯ ಅರೋಪಿಗಳ ಪೋನ್ ಗಳನ್ನು ಸಿಸಿಬಿ ಕದ್ದಾಲಿಕೆ ಮಾಡಿತ್ತು ಎನ್ನಲಾಗಿದೆ. ಆಡುಗೋಡಿಯಲ್ಲಿರುವ ಸಿಸಿಬಿ ಟೆಕ್ನಿಕಲ್ ಸೆಂಟರ್ ನಲ್ಲಿ ಪೋನ್ ಟ್ಯಾಪ್ ಮಾಡಲಾಗುತ್ತಿತ್ತು. ಟ್ಯಾಂಪಿಂಗ್ ವೇಳೆ ಪ್ರಮುಖ ಆರೋಪಿ ಫರಾಜ್ ಅಹಮದ್ ಜತೆ ಐಪಿಎಸ್ ಅಧಿಕಾರಿ ಭಾಸ್ಕರರಾವ್ ಮಾತನಾಡಿದ ಆರೋಪ ಕೇಳಿ ಬಂದಿತ್ತು.
ಈ ವಿಚಾರವನ್ನು ಇನ್ಸ್ಪೆಕ್ಟರ್ ಮಿರ್ಜಾ ಆಲಿ ಅವರು ಡಿಸಿಪಿ, ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರಿಗೆ ತಿಳಿಸಿದ್ದರು. ಟ್ಯಾಪ್ ಮಾಡಿರುವ ಅಡಿಯೋ ತಂದು ಕೊಡುವಂತೆ ಅಲೋಕ್ ಕುಮಾರ್ ಸೂಚಿಸಿದ್ದರು. ಅಲೋಕ್ ಕುಮಾರ್ ಸೂಚನೆ ಮೇರೆಗೆ ಮುಖ್ಯ ಪೇದೆ ಆನಂದ್ ಕುಮಾರ್ ಅಡಿಯೋ ನ್ನು ಮಿರ್ಜಾ ಆಲಿಗೆ ಕೊಟ್ಟಿದ್ದರು. ಟ್ಯಾಪಿಂಗ್ ಅಡಿಯೋವನ್ನು ಮುಖ್ಯ ಪೇದೆ ಆನಂದ ಕುಮಾರ್ಗೆ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನೀಡಿದ್ದಾರೆ. ಒಂದು ಸೋನಿ ಪೆನ್ ಡ್ರೈವ್ ಹಾಗೂ ಎಚ್ ಪಿ ಪೆನ್ ಡ್ರೈವ್ಗೆ ಕಾಫಿ ಮಾಡಿ ಕೊಡಲಾಗಿತ್ತು. ಅಡಿಯೋ ಪಡೆದ ಬಳಿಕ ಪೆನ್ ಡ್ರೈವ್ ಮತ್ತು ಲ್ಯಾಪ್ಟಾಪ್ನ್ನು ಅಲೋಕ್ ಕುಮಾರ್ ವಾಪಸು ಕೊಟ್ಟಿದ್ದರು. ಬಳಿಕ ಹಲವು ಅಡಿಯೋಗಳನ್ನು ವಾಟ್ಸಪ್ ಮೂಲಕ ಅಲೋಕ್ ಕುಮಾರ್ ತರಿಸಿಕೊಂಡಿದ್ದರು ಎನ್ನಲಾಗಿದೆ.
ಇದಾಗಿ ಕೆಲವು ದಿನಗಳ ನಂತರ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಭಾಸ್ಕರರವ್ ಅಧಿಕಾರ ಸ್ವೀಕರಿಸಿದ್ದರು. ಅರೋಪಿ ಜತೆ ಮಾತನಾಡಿರುವ ಅಡಿಯೋ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಪತ್ರಕರ್ತೆ ಖುಶಾಲಾ ಭಾಸ್ಕರರಾವ್ ಅವರಿಗೆ ಇ ಮೇಲ್ ಕಳುಹಿಸಿದ್ದರು. ಅಡಿಯೋ ಲೀಕ್ ಆಗಿ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಬಳಿಕ ಇದರ ಬಗ್ಗೆ ತನಿಖೆ ನಡೆಸುವಂತೆ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರಿಗೆ ಆದೇಶಿಸಲಾಗಿತ್ತು. ಈ ವೇಳೆ ಹಲವು ರಾಜಕಾರಣಿಗಳು, ಮಠದ ಸ್ವಾಮೀಜಿಗಳ ಪೋನ್ ಟ್ಯಾಪ್ ಮಾಡಿರುವ ಅರೋಪ ಕೇಳಿ ಬಂದಿತ್ತು. ಸಂದೀಪ್ ಪಾಟೀಲ್ ತನಿಖೆ ಮಾಡಿ ವರದಿ ನೀಡಿದ ಬಳಿಕ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು. ಎಫ್ಐಆರ್ ದಾಖಲಿಸಿದ್ದ ಸಿಬಿಐ ಪೊಲೀಸರು ಅಲೋಕ್ ಕುಮಾರ್ ಮತ್ತು ಪತ್ರಕರ್ತೆ ಖುಶಾಲಾ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಅಡಿಯೋ ಮೂಲವನ್ನು ಖುಶಾಲಾ ತಿಳಿಸಿರಲಿಲ್ಲ. ಇದೀಗ ಈ ಪ್ರಕರಣದಲ್ಲಿ ಸಿಬಿಐ ಪೊಲೀಸರು ಬಿ ವರದಿ ಸಲ್ಲಿಸಿದ್ದು, ಮತ್ತೆ ವಿವಾದಕ್ಕೆ ನಾಂದಿ ಹಾಡಿದೆ.