ಹಾವೇರಿ: ಮಗುವಿಗೆ ಊಟ ಮಾಡಿಸುತ್ತಿದ್ದ ವೇಳೆ ತೆಂಗಿನ ಕಾಯಿ ತಲೆ ಮೇಲೆ ಬಿದ್ದು 11 ತಿಂಗಳ ಮಗು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಹಿರೆಕೇರೂರು ತಾಲೂಕಿನ ಹಂಸಭಾವಿಯಲ್ಲಿ ನಡೆದಿದೆ.
ಹಂಸಭಾವಿಯ ಮಲ್ಲಿಕಾರ್ಜುನ ಮತ್ತು ಮಾಲಾ ಎಂಬ ದಂಪತಿಗಳ ಮಗು ತನ್ವೀತ್ ವಾಲ್ಮೀಕಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದೆ. ನಿನ್ನೆ ಬೆಳಗ್ಗೆ ಮನೆಯ ಎದುರು ಮಗುವನ್ನು ಆಟವಾಡಿಸುತ್ತಾ ಊಟ ಮಾಡುವ ಸಂದರ್ಭದಲ್ಲಿ ದುರ್ಘಟನೆ ನಡೆದಿದ್ದು, ತಕ್ಷಣವೇ ಮಗುವನ್ನು ಕುಟುಂಬಸ್ಥರು ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ನಿನ್ನೆ ಸಂಜೆ ವೇಳೆಗೆ ಮಗು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದೆ. ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಹಂಸಭಾವಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.