ಬೆಂಗಳೂರು, ಮೇ 07 : ಬೆಂಗಳೂರು ನಗರದಿಂದ ವಲಸೆ ಕಾರ್ಮಿಕರನ್ನು ತಮ್ಮ ಊರಿಗೆ ತಲುಪಿಸಲು ಕೆಎಸ್ಆರ್ಟಿಸಿ ಆರಂಭಿಸಿದ್ದ ಬಸ್ ಸೇವೆ ಮೇ 8ರಿಂದ ಸ್ಥಗಿತಗೊಳ್ಳಲಿದೆ. ಗುರುವಾರದ ತನಕ ಉಚಿತವಾಗಿ ಬಸ್ಗಳಲ್ಲಿ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗಿದೆ. ಕಳೆದ 5 ದಿನಗಳಿಂದ ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಕೆಎಸ್ಆರ್ಟಿಸಿ ಬಸ್ನಲ್ಲಿ ವಲಸೆ ಕಾರ್ಮಿಕರು ತೆರಳಿದ್ದಾರೆ. ಉಚಿತ ಪ್ರಯಾಣಕ್ಕೆ ಗುರುವಾರ ಕೊನೆ ದಿನವಾಗಿದ್ದು, ಶುಕ್ರವಾರದಿಂದ ಬಸ್ ಸಂಚಾರ ಸ್ಥಗಿತಗೊಳ್ಳಲಿದೆ.
ಇದುವರೆಗೂ ಸುಮಾರು 3,500 ಬಸ್ಗಳನ್ನು ಕೆಎಸ್ಆರ್ಟಿಸಿ ಓಡಿಸಿದ್ದು, 1 ಲಕ್ಷಕ್ಕೂ ಅಧಿಕ ಜನರು ತಮ್ಮ-ತಮ್ಮ ಊರುಗಳಿಗೆ ತೆರಳಿದ್ದಾರೆ. ಬಸ್ಗಳಿಗಾಗಿ ಬೇಡಿಕೆ ಬರುತ್ತಲೇ ಇದೆ. ಇನ್ನೂ ನೂರಾರು ಕಾರ್ಮಿಕರು ಊರಿಗೆ ಹೋಗಲು ತಯಾರಾಗುತ್ತಿದ್ದಾರೆ.
ಲಾಕ್ ಡೌನ್ ಘೋಷಣೆಯಾದ ಬಳಿಕ ಕೆಎಸ್ಆರ್ಟಿಸಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಎರಡನೇ ಹಂತದ ಲಾಕ್ ಡೌನ್ ಮುಗಿಯುವುದಕ್ಕೂ ಒಂದು ದಿನ ಮೊದಲು ಕರ್ನಾಟಕ ಸರ್ಕಾರ ವಲಸೆ ಕಾರ್ಮಿಕರು ಊರುಗಳಿಗೆ ತೆರಳಲು ಅವಕಾಶ
ಕೆಎಸ್ಆರ್ಟಿಸಿಯ ಉಚಿತ ಬಸ್ ವ್ಯವಸ್ಥೆ ಬಳಕೆ ಮಾಡಿಕೊಂಡು ಸುಮಾರು 1 ಲಕ್ಷ ವಲಸೆ ಕಾರ್ಮಿಕರು ಬೆಂಗಳೂರಿನಿಂದ ತಮ್ಮ ಊರುಗಳಿಗೆ ಪ್ರಯಾಣ ಮಾಡಿದ್ದಾರೆ. ರಾಜ್ಯದ ವಿವಿಧ ಒಟ್ಟು72 ಸ್ಥಳಗಳಿಗೆ ಬಸ್ ಕಾರ್ಯಚರಣೆ ಮಾಡಲಾಗಿದೆ. ಅತ್ಯಧಿಕ ಬಸ್ಸುಗಳು ಯಾದಗಿರಿ, ಕಲಬುರಗಿ, ಬೀದರ್, ರಾಯಚೂರು, ಸುರಪುರ ಮುಂತಾದ ಸ್ಥಳಗಳಿಗೆ ತೆರಳಿವೆ.
ಕೆಎಸ್ಆರ್ಟಿಸಿ ಬಸ್ಗಳು ಬೆಂಗಳೂರು ನಗರದಿಂದ ಮಾತ್ರ ಸಂಚಾರ ನಡೆಸಿಲ್ಲ. ಹುಬ್ಬಳ್ಳಿ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಿಂದ ಉಚಿತ ಬಸ್ಗಳು ಕಾರ್ಮಿಕರನ್ನು ಕರೆದುಕೊಂಡು ಹೋಗಿವೆ. ಬೆಂಗಳೂರು ನಗರದಿಂದ ಹೆಚ್ಚಿನ ಬಸ್ಗಳು ಸಂಚಾರ ನಡೆಸಿವೆ.