ಬೆಂಗಳೂರು: ಸತೀಶ್ ಜಾರಕಿಹೊಳಿ ಅವರು ಏನು ತಪ್ಪು ಮಾಡಿಲ್ಲ, ಕಾನೂನು ಚೌಕಟ್ಟಿನಲ್ಲಿ ವ್ಯವಹಾರ ಮಾಡಿದ್ದಾರೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಜಾರಕಿಹೊಳಿ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಅವರು ನನ್ನ ಸಹೋದ್ಯೋಗಿ. ಅವರು ಏನು ತಪ್ಪು ಮಾಡಿಲ್ಲ, ಕಾನೂನು ಚೌಕಟ್ಟಿನಲ್ಲಿ ವ್ಯವಹಾರ ಮಾಡಿದ್ದಾರೆ. ಹೊರಗಡೆ ಹೋಗಬಾರದು, ವ್ಯವಹಾರ ಮಾಡಬಾರದು ಅಂತ ಎಲ್ಲಿದೆ? ಇದೆಲ್ಲ ರಾಜಕಾರಣ. ಇನ್ನೂ ಮೂರ್ನಾಲ್ಕು ಜನರ ಮೇಲೆ ದಾಳಿ ಮಾಡಬಹುದು. ಇಡೀ ಕಾಂಗ್ರೆಸ್ ಪಾರ್ಟಿನ ಟ್ರ್ಯಾಪ್ ಮಾಡೋದಕ್ಕೆ ತಯಾರಿ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿಯವರ ಮೇಲೆಲ್ಲೂ ಕೂಡ ದಾಳಿ ಮಾಡುತ್ತಿಲ್ಲ. ಸಮುದಾಯ ಮಾತ್ರ ಅಲ್ಲ. ಇಡೀ ಪಕ್ಷವನ್ನೇ ಟಾರ್ಗೆಟ್ ಮಾಡಲಾಗಿದೆ. ವಂದೇ ಮಾತರಂ ಗೀತೆ ಮೊಟಕು ಮಾಡಿರೋ ವಿಚಾರವಾಗಿ, ವಂದೇ ಮಾತರಂ ಬಗ್ಗೆ ನಮ್ಮ ಪಕ್ಷದ ಸ್ಟ್ಯಾಂಡ್ ಸ್ಪಷ್ಟವಾಗಿದೆ. ಅವರು ರಾಜಕೀಯ ಮಾಡ್ತಿದ್ದಾರೆ ಅಷ್ಟೇ ಎಂದಿದ್ದಾರೆ.
ಇದೇ ವೇಳೆ ಮಾತನಾಡಿ, ಅರಣ್ಯ ಹುತಾತ್ಮರಿಗೆ ಇಂದು ಗೌರವ ಸಲ್ಲಿಸಿದ್ದೇವೆ. ಅರಣ್ಯ ಸಿಬ್ಬಂದಿ ಜೊತೆ ಪೊಲೀಸ್ ಅವರು ಕೂಡ ಭತ್ಯೆ ಕೇಳ್ತಿದ್ದಾರೆ. ಇದರ ಬಗ್ಗೆ ನಾನು ಚರ್ಚೆ ಮಾಡುತ್ತೇನೆ ಎಂದಿದ್ದಾರೆ.
ಇನ್ನೂ ಕಾನೂನು ಬಾಹಿರ ಬಂದೂಕು ಶರಣಾಗತಿಗೆ ಸೂಚನೆ ವಿಚಾರವಾಗಿ ಮಾತನಾಡಿ, ಕಾನೂನು ಬಾಹಿರವಾಗಿ ಯಾರಾದರೂ ಬಂದೂಕನ್ನು ಇಟ್ಟುಕೊಂಡಿದ್ದರೆ ಕೂಡಲೇ ಅದನ್ನ ಸರ್ಕಾರ ಒಪ್ಪಿಸಬೇಕು. ಸರೆಂಡರ್ ಮಾಡಲು ನವೆಂಬರ್ 1ನೇ ತಾರೀಖಿನವರೆಗೂ ಅವಕಾಶ ಕೊಡ್ತೀವಿ. ಪೊಲೀಸ್ರು, ಅಧಿಕಾರಿಗಳು ಜನರ ಮನವೊಲಿಸಬೇಕು. ಅದರ ಜೊತೆ ಒಂದು ಕ್ಷಮೆಯಾಚನೆ ಬರೆದು ಕೊಟ್ರೆ ಸಾಕು ಎಂದು ತಿಳಿಸಿದ್ದಾರೆ.
ಒಂದರ ನಂತರ ಸರೆಂಡರ್ ಮಾಡದಿದ್ದರೆ ಕ್ರಮ ಆಗುತ್ತದೆ. ರಕ್ಷಣೆಗಾಗಿ ಬಂದೂಕು ಬೇಕಿದ್ದರೆ ಅರ್ಜಿ ಹಾಕಲಿ. ಹೆಚ್ಚಿನ ಅರಣ್ಯ ಇಲಾಖೆ ಸಿಬ್ಬಂದಿಗಳು ಪರವಾನಗಿ ಇಲ್ಲದೇ ಇರುವ ಬಂದೂಕುಗಳಿಂದಲೇ ಜೀವ ಕಳೆದುಕೊಂಡಿದ್ದಾರೆ. ನೀವು ನಿಮ್ಮ ಹಾಗೂ ನಿಮ್ಮ ಪ್ರಾಣಿಗಳ ರಕ್ಷಣೆಗಾಗಿ ಬಂದೂಕು ಇಟ್ಟುಕೊಳ್ಳುವುದಾದರೆ ಪರವಾನಗಿ ಪಡೆಯಿರಿ. ಈ ಹಿಂದೆ ರಾಮಮೂರ್ತಿ ಎನ್ನುವ ಹಿರಿಯ ಅಧಿಕಾರಿ ಅನೇಕರು ಅಕ್ರಮ ನಾಡ ಬಂದೂಕುಗಳನ್ನು ಹೊಂದಿರುವ ಬಗ್ಗೆ ಹೇಳಿದ್ದರು. ಆಗ ನಾನು ನನ್ನ ಕ್ಷೇತ್ರದಲ್ಲಿ 300ಕ್ಕೂ ಹೆಚ್ಚು ಬಂದೂಕುಗಳನ್ನು ಜನರಿಂದ ಸರ್ಕಾರಕ್ಕೆ ಒಪ್ಪಿಸಿದ್ದೆ. ಇನ್ನೂ ಹೆಚ್ಚಿನ ನಾಡ ಬಂದೂಕುಗಳು ಇರುವ ಬಗ್ಗೆ ಸರ್ಕಾರಕ್ಕೆ ಮಾಹಿತಿಯಿದೆ ಎಂದರು.
ಕಸ್ತೂರಿರಂಗನ್ ವರದಿ ವಿಚಾರವಾಗಿ, ಮಂಗಳೂರು ಜಿಲ್ಲೆಗೆ ಭೇಟಿ ಕೊಟ್ಟ ಬಳಿಕ 3-4 ಜಿಲ್ಲೆಗಳಿಗೆ ಭೇಟಿಯನ್ನು ಕೊಡುತ್ತೇನೆ. ಅಲ್ಲಿ ಕಸ್ತೂರಿರಂಗನ್ ಸಂಬಂಧಪಟ್ಟ ಹಾಗೇ ರೈತರನ್ನು ಭೇಟಿ ಮಾಡುತ್ತೇನೆ. ನಾವು ರೈತರ ಸಮಸ್ಯೆ, ಬರದ ಸಮಸ್ಯೆ ಹಾಗೂ ಕಸ್ತೂರಿ ರಂಗನ್ ಸಮಸ್ಯೆ ಕುರಿತು ವಿಶೇಷ ಅಧಿವೇಶನ ಕರೆದಿದ್ದೇವೆ ಎಂದು ತಿಳಿಸಿದ್ದಾರೆ.
Laxmi News 24×7