ಚಿಕ್ಕಬಳ್ಳಾಪುರ: ತಾಲೂಕಿನ ಅಣಕನೂರು ಗ್ರಾಮದ ಸರ್ವೆ ನಂ.109 ರಲ್ಲಿರುವ 26 ಎಕರೆ ಸರ್ಕಾರಿ ಜಮೀನಿಗೆ ಖಾಸಗಿ ಮಹಿಳೆಯ ಹೆಸರಲ್ಲಿ ಅಕ್ರಮವಾಗಿ ಇ-ಖಾತೆ ಸೃಜಿಸಿದ ಆರೋಪ ಕೇಳಿಬಂದಿದೆ.
ಚಿಕ್ಕಬಳ್ಳಾಪುರ ನಗರಸಭೆ ಪೌರಾಯುಕ್ತ ಹಾಗೂ ಅಧಿಕಾರಿಗಳ ವಿರುದ್ಧ ದೂರು ನೀಡಿದ ಹಿನ್ನೆಲೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಅಕ್ರಮ ಇ-ಖಾತೆ ಪ್ರಕರಣದ ತನಿಖೆಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಜಿ. ಪ್ರಭು ಅವರು ವಿಶೇಷ ತನಿಖಾ ತಂಡವನ್ನು ನೇಮಕ ಮಾಡಿ ಆದೇಶಿಸಿದ್ದಾರೆ.
ಎಸಿ ಅಶ್ವಿನ್, ಪಿಡಿ ಮಂಜುನಾಥ್ ಹಾಗೂ ನಗರಸಭೆ ಆಯುಕ್ತೆ ಶಿಲ್ಪಾ ದೇಸಾಯಿ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಲಾಗಿದೆ. 24 ಗಂಟೆಯೊಳಗಾಗಿ ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಸರ್ಕಾರಿ ಜಮೀನಿಗೆ ಖಾಸಗಿ ಮಹಿಳೆ ಭರಣಿ ಹೆಸರಲ್ಲಿ ಇ-ಖಾತೆ ಹೇಗೆ ಸೃಜನೆಯಾಯಿತು? ಯಾವ ದಾಖಲೆಗಳ ಆಧಾರದ ಮೇಲೆ ಇ-ಖಾತೆ ಮಾಡಲಾಯಿತು? ಇದರಲ್ಲಿ ನಗರಸಭೆ ಅಧಿಕಾರಿಗಳ ಪಾತ್ರವೇನು? ಅಕ್ರಮದ ಹಿಂದೆ ಯಾರ ಕೈವಾಡವಿದೆ? ಎಂಬುದರ ಬಗ್ಗೆ ತನಿಖಾ ತಂಡ ಪರಿಶೀಲನೆ ನಡೆಸಲಿದೆ.
ಜಿಲ್ಲಾಧಿಕಾರಿಗಳ ಆದೇಶದ ಬಳಿಕ 26 ಎಕರೆ ಸರ್ಕಾರಿ ಜಮೀನಿನ ಇ-ಖಾತೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, 24 ಗಂಟೆಯೊಳಗೆ ತನಿಖಾ ವರದಿ ಹೊರಬರುವ ಸಾಧ್ಯತೆಯಿದೆ.
Laxmi News 24×7