ಬೆಳಗಾವಿ: ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಭೋವಿ ಗಲ್ಲಿಯ ನಿವಾಸಿ ನಿಲೇಶ ಸುತಾರ ಬಂಧಿತ ಆರೋಪಿ. 2026ರ ಜ. 1ರಂದು ಮಂಡೋಳಿ ರಸ್ತೆಯ ಭವಾನಿ ನಗರದ ತಮ್ಮ ಮನೆಯಿಂದ ಚಿನ್ನಾಭರಣ ಕಳ್ಳತನವಾಗಿವೆ ಎಂದು ರೋಹನ್ ಜಾಧವ ಎಂಬುವರು ಗ್ರಾಮೀಣ ಠಾಣೆಗೆ ದೂರು ನೀಡಿದ್ದರು.
ಈ ಕುರಿತು ತನಿಖೆ ಕೈಗೊಂಡಿದ್ದ ಪೊಲೀಸರು, ಸಂಶಯ ವ್ಯಕ್ತಪಡಿಸಿ ನಿಲೇಶ ಸುತಾರ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ರೋಹನ್ ಜಾಧವ ಮತ್ತು ಮಚ್ಛೆಯ ಲಕ್ಷ್ಮೀ ದೇವಲಾಪುರ ಎಂಬುವರ ಮನೆಯಲ್ಲಿ ಕಳ್ಳತನ ಮಾಡಿರುವುದಾಗಿ ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. 7 ಲಕ್ಷ ರೂ. ಮೌಲ್ಯದ 45 ಗ್ರಾಂ ಬಂಗಾರದ ಆಭರಣ ಹಾಗೂ 10.90 ಲಕ್ಷ ರೂ. ಮೌಲ್ಯದ 4 ಕೆಜಿ 179 ಗ್ರಾಂ ಬೆಳ್ಳಿ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳು ಶಾಮೀಲಿದ್ದು, ಅವರ ಪತ್ತೆಗೆ ಕ್ರಮ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Laxmi News 24×7