ಬೆಂಗಳೂರು: ‘ನೀವು ಕೂತ್ಕೊ ಅಂದ್ರೆ ಕೈಮುಗಿದು ಕೂತು ಬಿಡ್ತೀನಿ. ನಮಗೂ ಮಾತಾಡೋಕೆ ಅವಕಾಶ ಕೊಡಿ. ನಾವೇನು ಕಾಫಿ-ಟೀ ಕುಡಿಯಲು ಇಲ್ಲಿಗೆ ಬರಬೇಕಾ’ ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಸ್ಪೀಕರ್ ಸ್ಥಾನದಲ್ಲಿ ಕುಮಾರ್ ಬಂಗಾರಪ್ಪ ಅವರನ್ನು ಖಾರವಾಗಿ ಪ್ರಶ್ನಿಸಿದರು.
ವಿಧಾನಸಭೆಯಲ್ಲಿ ಬೆಲೆ ಏರಿಕೆ ಬಗ್ಗೆ ನಡೆಯುತ್ತಿದದ ಚರ್ಚೆಗೆ ಉತ್ತರ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎದ್ದು ನಿಂತರು. ಈ ವೇಳೆ ಮಾತನಾಡಲು ನಿಂತ ಶಿವಲಿಂಗೇಗೌಡರಿಗೆ ಕುಳಿತುಕೊಳ್ಳುವಂತೆ ಕುಮಾರ್ ಬಂಗಾರಪ್ಪ ಸೂಚಿಸಿದರು. ಸ್ಪೀಕರ್ ಸ್ಥಾನದಲ್ಲಿದ್ದವರ ಸೂಚನೆಯಿಂದ ಬೇಸರಗೊಂಡ ಶಿವಲಿಂಗೇಗೌಡ ಮೇಲಿನಂತೆ ಪ್ರತಿಕ್ರಿಯಿಸಿದರು. ನಂತರ ಮಾತು ಮುಂದುವರಿಸಲು ಶಿವಲಿಂಗೇಗೌಡರಿಗೆ ಕುಮಾರ್ ಬಂಗಾರಪ್ಪ ಅವಕಾಶ ನೀಡಿದರು.
ನಾವು ಪೆಟ್ರೋಲಿಯಂ ಉತ್ಪನ್ನಗಳಿಗಾಗಿ ವಿದೇಶವನ್ನು ಅವಲಂಬಿಸಿದ್ದೇವೆ. ನಮ್ಮ ದೇಶದಲ್ಲಿ ಕೇವಲ ಶೇ 10ರಷ್ಟು ಮಾತ್ರ ಉತ್ಪಾದನೆಯಾಗುತ್ತಿದೆ. ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಇಂಧನದ ಮೇಲಿನ ಸೆಸ್ ಹೆಚ್ಚಾಗಿವೆ. ಮೊದಮೊದಲು ಸಬ್ಸಿಡಿ ಹಣವನ್ನು ನೇರವಾಗಿ ಗ್ರಾಹಕರಿಗೆ ಕೊಡುತ್ತಿದ್ದರು. ಆದರೆ ನಂತರದ ದಿನಗಳಲ್ಲಿ ಆ ಪದ್ಧತಿಯನ್ನೂ ಕೈಬಿಟ್ಟರು ಎಂದು ಟೀಕಿಸಿದರು.
ಜೆಡಿಎಸ್ ಧರಣಿ
ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಜೆಡಿಎಸ್ ಸದಸ್ಯರು ಧರಣಿ ಆರಂಭಿಸಿದರು. ಮೂರು ವಿಚಾರಗಳ ಮೇಲೆ ಚರ್ಚೆಗೆ ನೊಟೀಸ್ ಕೊಟ್ಟಿದ್ದೇವೆ. ಮಾತಿಗೆ ಅವಕಾಶ ಕೊಟ್ಟಿಲ್ಲ ಎಂದು ಪ್ರತಿಭಟನೆ ನಡೆಸಿದರು. ಮಾತನಾಡಲು ಅವಕಾಶ ನೀಡುವುದಾಗಿ ಸ್ಪೀಕರ್ ಭರವಸೆ ನೀಡಿದ ನಂತರ ಜೆಡಿಎಸ್ ಶಾಸಕರು ಪ್ರತಿಭಟನೆ ಹಿಂಪಡೆದರು.