Breaking News

ರಾಜ್ಯಕ್ಕೆ ಬರಬೇಕಿದ್ದ ಕನಿಷ್ಠ ಬೆಂಬಲ ಬೆಲೆ ಯೋಜನೆಯ (MSP) ಅನುದಾನ ಬಿಡುಗಡೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ರವರಿಗೆ ಬೇಟಿ ಮಾಡಿದ :-ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ

Spread the love

 

ಮೊದಲ ಹಂತವಾಗಿ 190 ಕೋಟಿ ರೂಗಳ ಬಿಡುಗಡೆ, ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಆಹಾರ ಸಚಿವ ಮುನಿಯಪ್ಪ

ನವದೆಹಲಿ:ಮಾನ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಕೆ.ಹೆಚ್. ಮುನಿಯಪ್ಪ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರನ್ನು ಭೇಟಿ ಮಾಡಿ, ಕರ್ನಾಟಕದ ಕನಿಷ್ಠ ಬೆಂಬಲ ಬೆಲೆ (MSP) ಯೋಜನೆಗೆ ಸಂಬಂಧಿಸಿದ ಬಾಕಿ ಮರುಪಾವತಿ ಮೊತ್ತಗಳ ಬಿಡುಗಡೆ ಕುರಿತು ಚರ್ಚಿಸಿದರು.

ಸಭೆಯಲ್ಲಿ ಸಚಿವರು, ಕೆಎಂಎಸ್ 2025-26ರಲ್ಲಿ ರಾಜ್ಯವು 5.69 ಲಕ್ಷ ಮೆಟ್ರಿಕ್ ಟನ್ ರಾಗಿ, 2.21 ಲಕ್ಷ ಮೆಟ್ರಿಕ್ ಟನ್ ಜೋಳ ಹಾಗೂ 0.0567 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು ಖರೀದಿಸಿದ್ದು, ಇದರ ಒಟ್ಟು ಮೌಲ್ಯ ₹4,422.17 ಕೋಟಿ ಎಂದು ವಿವರಿಸಿದರು. ಈ ಪೈಕಿ ಭಾರತ ಸರ್ಕಾರವು ಇದುವರೆಗೆ ₹190.10 ಕೋಟಿ ಬಿಡುಗಡೆ ಮಾಡಿದ್ದು, ಉಳಿದ ₹4,232.07 ಕೋಟಿ ಮರುಪಾವತಿಯನ್ನು ಶೀಘ್ರ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

ಅಲ್ಲದೆ, ಕೆಎಂಎಸ್ 2022-23ಕ್ಕೆ ಸಂಬಂಧಿಸಿದ ₹375.99 ಕೋಟಿ ತಾತ್ಕಾಲಿಕ ಸಬ್ಸಿಡಿ ಹಕ್ಕುಪತ್ರವು ಕೇಂದ್ರ ಸರ್ಕಾರದ ಪರಿಶೀಲನೆಯಲ್ಲಿದ್ದು, ಅದನ್ನೂ ಶೀಘ್ರ ಮಂಜೂರು ಮಾಡುವಂತೆ ಕೋರಿದರು.

ಇದರ ಜೊತೆಗೆ, ಕೆಎಂಎಸ್ 2009-10 ರಿಂದ 2024-25ರವರೆಗಿನ ಅವಧಿಗೆ ಸಂಬಂಧಿಸಿದ ₹1,902.58 ಕೋಟಿ ಎಂಎಸ್‌ಪಿ ಬಾಕಿ ಮರುಪಾವತಿ ಮೊತ್ತವನ್ನು ಶೀಘ್ರ ಬಿಡುಗಡೆ ಮಾಡುವಂತೆ ಸಚಿವರು ಮನವಿ ಮಾಡಿದರು.

ಈ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ, ₹1,902.58 ಕೋಟಿ ಬಾಕಿ ಮರುಪಾವತಿ ಪ್ರಕರಣವನ್ನು ಆದ್ಯತೆಯ ಮೇರೆಗೆ ಪರಿಶೀಲಿಸಿ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಹಾಗೆಯೇ ಕೆಎಂಎಸ್ 2025-26ರ ಮರುಪಾವತಿ ಹಕ್ಕುಪತ್ರಗಳು ರಾಜ್ಯ ಸರ್ಕಾರದಿಂದ ಸಲ್ಲಿಕೆಯಾದ ತಕ್ಷಣ ನಿಯಮಾನುಸಾರ ಪರಿಶೀಲಿಸಿ ಬಿಡುಗಡೆ ಮಾಡುವುದಾಗಿ ತಿಳಿಸಿದರು.

ಕೇಂದ್ರ ಸಚಿವರ ಸಕಾರಾತ್ಮಕ ಸ್ಪಂದನೆಗೆ ಹಾಗೂ ಪ್ರಸಕ್ತ ಹಣಕಾಸು ವರ್ಷದಲ್ಲಿ ₹190.10 ಕೋಟಿ ಬಿಡುಗಡೆ ಮಾಡಿರುವುದಕ್ಕೆ ಸಚಿವರಾದ ಶ್ರೀ ಕೆ.ಹೆಚ್. ಮುನಿಯಪ್ಪ ಅವರು ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ಬಾಕಿ ಇರುವ ಎಲ್ಲ ಮರುಪಾವತಿ ಮೊತ್ತಗಳು ಶೀಘ್ರ ಬಿಡುಗಡೆಯಾಗಲಿದ್ದು, ಇದರಿಂದ ರಾಜ್ಯದಲ್ಲಿ ಎಂಎಸ್‌ಪಿ ಖರೀದಿ ಕಾರ್ಯಗಳು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಯಲಿದ್ದು, ರೈತರಿಗೆ ಸಕಾಲದಲ್ಲಿ ಪಾವತಿ ಮಾಡಲು ಅನುಕೂಲವಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.


Spread the love

About Laxminews 24x7

Check Also

ಎಸ್‌ಐಆರ್ ಕಾರ್ಯಕ್ಕೆ ನೆಟ್‌ವರ್ಕ್ ಸಮಸ್ಯೆ – ಮೊಬೈಲ್ ಹಿಡಿದು ಬೆಟ್ಟ ಏರಿದ ಬಿಎಲ್‌ಒಗಳು

Spread the loveರಾಯಚೂರು: ಲಿಂಗಸುಗೂರು  ತಾಲೂಕಿನಲ್ಲಿ ಎಸ್‌ಐಆರ್‌‌ ಕಾರ್ಯದಲ್ಲಿ ತೊಡಗಿರುವ ಬಿಎಲ್‌ಒಗಳು ಮೊಬೈಲ್‌ಗೆ ನೆಟ್‌ವರ್ಕ್ ಇಲ್ಲದೇ ಪರದಾಡಿದ್ದಾರೆ. ನೆಟ್‌ವರ್ಕ್‌ಗಾಗಿ ಮೊಬೈಲ್‌ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ