ಬೆಳಗಾವಿ : ಉಗಾರ ಸಕ್ಕರೆ ಕಾರ್ಖಾನೆ ವಿರುದ್ಧ ಕೆಲವರು ಸುಳ್ಳು ಆರೋಪಗಳನ್ನು ಮಾಡುತ್ತ ಕಾರ್ಖಾನೆ ತೇಜೋವಧೆ ಮಾಡುತ್ತಿದ್ದಾರೆ. ಕಾರ್ಖಾನೆಯ ಕಾರ್ಯಕ್ಕೆ ಅಡ್ಡಿಪಡಿಸುವ ಕೆಲಸ ಮಾಡುತ್ತಿದ್ದು, ಇಂತಹ ಸುಳ್ಳು ಅರ್ಜಿಗಳಿಗೆಗೆ ಮಾನ್ಯತೆ ನೀಡಿ, ಸರ್ಕಾರಿ ಇಲಾಖೆಗಳು ವಿನಾಕಾರಣ ತೊಂದರೆ ಕೊಡಬಾರದು ಎಂದು ಆಗ್ರಹಿಸಿ ಉಗಾರ ಶುಗರ್ಸ್ ವರ್ಕರ್ಸ್ ಯೂನಿಯನ್ನಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.
ಉಗಾರ ಸಕ್ಕರೆ ಕಾರ್ಖಾನೆ ವಿರುದ್ಧ ಜಲ, ವಾಯು, ಶಬ್ದ ಮತ್ತು ಭೂ ಮಾಲಿನ್ಯದ ಕುರಿತು ಕೆಲವರು ಆಯಾ ಇಲಾಖೆಗೆ ಪದೇ ಪದೇ ದೂರು ಅರ್ಜಿಗಳನ್ನು ನೀಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಇಲಾಖೆಗಳಿಂದ ಆಗಾಗ ನಡೆಯುತ್ತಿರುವ ವಿಚಾರಣೆ, ತಪಾಸಣೆಗಳಲ್ಲಿ ಎಲ್ಲೂ ಲೋಪ ಕಂಡು ಬಂದಿಲ್ಲ. ಎಲ್ಲವೂ ಸರಿಯಾಗಿಯೇ ನಡೆಯುತ್ತಿದ್ದರೂ ಕೆಲವರು ಮಾಡುತ್ತಿರುವ ಆರೋಪಗಳಿಂದ ಪದೇ ಪದೇ ಇಲಾಖೆಯ ವಿಚಾರಣೆಗಳನ್ನು ಎದುರಿಸಿರುವ ಪರಿಸ್ಥಿತಿ ಎದುರಾಗಿದ್ದು, ಸತ್ಯಕ್ಕೆ ದೂರವಾದ ಅರ್ಜಿಗಳು ಬಂದಾಗ ಪೂರ್ವಾಪರ ವಿಚಾರಿಸದೇ ಯಾವುದೇ ಕಠಿಣ ಕ್ರಮ ಕೈಗೊಳ್ಳಬಾರದು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸುಳ್ಳು ಆರೋಪಗಳಿಂದ ಕಬ್ಬು ನುರಿಸುವ ಪ್ರಮಾಣ ಮತ್ತು ಸಕ್ಕರೆ ಮಾರಾಟ ಕುಸಿದಿದೆ. ಕಾರ್ಮಿಕರು ಆರ್ಥಿಕ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೇವೆ. ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳ ಸಮ್ಮುಖದಲ್ಲಿ ಈಗಾಗಲೇ ವಾಸ್ತವಾಂಶಗಳನ್ನು ಲಿಖಿತವಾಗಿ ಸಲ್ಲಿಸಲಾಗಿದೆ. ಉಗಾರ ಖುರ್ದ ಪುರಸಭೆಯ ಸಾಮಾನ್ಯ ಸಭೆಯಲ್ಲೂ ಕಾರ್ಖಾನೆಯಿಂದ ಯಾವುದೇ ಜಲ, ವಾಯು, ಭೂಮಿ ಅಥವಾ ಶಬ್ದ ಮಾಲಿನ್ಯವಾಗುತ್ತಿಲ್ಲ ಎಂಬ ಸರ್ವಾನುಮತದ ಠರಾವ ಅಂಗೀಕರಿಸಿ ಸಂಬಂಧಿತ ಇಲಾಖೆಗಳಿಗೆ ಕಳುಹಿಸಲಾಗಿದೆ. ಹೀಗಾಗಿ, ಸುಳ್ಳು ದೂರಿನ ಆಧಾರದ ಮೇಲೆ ಕಾರ್ಖಾನೆಯ ವಿರುದ್ಧ ಕ್ರಮ ಕೈಗೊಂಡರೆ ಕಾರ್ಮಿಕರು, ರೈತರು ಮತ್ತು ಗ್ರಾಮಸ್ಥರಿಗೆ ಅನ್ಯಾಯವಾಗಲಿದೆ. ಅಗತ್ಯವಿದ್ದರೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಯೂನಿಯನ್ ಅಧ್ಯಕ್ಷ ಕೆ.ಎಂ.ಕರಿಗಾರ, ಎಸ್.ಎಂ.ಕಾಂಬಳೆ, ಪ್ರಫುಲ್ ತುರಸೆ, ಮಹಾದೇವ ವಡಗಾವಿ, ಎ.ಎಚ್. ನಾವಲಿಗೇರ, ಬಾಳುಸಾಬ, ಎನ್.ಎನ್.ಟೋಪಿವಾಲಿ, ಎಸ್.ಎನ್.ಪೂಜಾರಿ, ಎ.ಎ.ಕಾಮತ, ಎಂ.ಜಿ.ಉಳ್ಳಗಡ್ಡಿ, ಎ.ಬಿ. ವಾಲಿ ಮತ್ತು ಪಿ.ವಿ.ಜೋಶಿ ಇತರರಿದ್ದರು.
Laxmi News 24×7