ಚಾಮರಾಜನಗರ: ಹಸಿರು ವಲಯದಲ್ಲಿ ಲಾಕ್ಡೌನ್ ಸಡಿಲಿಕೆ ಹಿನ್ನೆಲೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿರುವ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಪುನರಾರಂಭಗೊಂಡಿದೆ. ಆದರೆ ಕಾರ್ಖಾನೆ ಆಡಳಿತ ಮಂಡಳಿ ತಮಿಳುನಾಡಿನಿಂದ 45ಕ್ಕೂ ಹೆಚ್ಚು ಕಾರ್ಮಿಕರನ್ನು ಕರೆಸಿಕೊಂಡಿರುವುದು ಕೊರೊನಾ ಮುಕ್ತವಾಗಿರುವ ಚಾಮರಾಜನಗರ ಜಿಲ್ಲೆಯಲ್ಲಿ ಭಾರೀ ಆತಂಕ ಉಂಟುಮಾಡಿದೆ.
ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದೇಶದಲ್ಲೇ 5ನೇ ಸ್ಥಾನದಲ್ಲಿರುವ ತಮಿಳುನಾಡಿನಿಂದ ಕಾರ್ಮಿಕರನ್ನು ಕರೆಸಿಕೊಳ್ಳುವ ಔಚಿತ್ಯವಾದರೂ ಏನಿತ್ತು ಎಂದು ರೈತ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಒಂದು ವೇಳೆ ಆ ಕಾರ್ಮಿಕರ ಮೂಲಕ ಜಿಲ್ಲೆಗೆ ಕೊರೊನಾ ತಗುಲಿದ್ರೆ ಯಾರು ಹೊಣೆ ಎಂದು ರೈತ ಮುಖಂಡರು ಪ್ರಶ್ನಿಸಿದ್ದಾರೆ.
ಹೊರ ರಾಜ್ಯದಿಂದ ಬರುವ ಕಾರ್ಮಿಕರನ್ನು ಹದಿನಾಲ್ಕು ದಿನ ಕ್ವಾರಂಟೈನ್ ನಲ್ಲಿಟ್ಟು ನಂತರ ಕೆಲಸಕ್ಕೆ ತೆಗೆದುಕೊಳ್ಳಬೇಕಿತ್ತು. ಇಲ್ಲದಿದ್ದರೆ ಅವರ ಗಂಟಲು ದ್ರವ ಹಾಗೂ ರಕ್ತ ಪರೀಕ್ಷೆ ನಡೆಸಿ ನಂತರ ಕಾರ್ಖಾನೆಗೆ ಕಳುಹಿಸಬೇಕಿತ್ತು. ಆದರೆ ಇದ್ಯಾವುದನ್ನು ಮಾಡದೇ ಕೇವಲ ಪ್ರಾಥಮಿಕ ಆರೋಗ್ಯ ತಪಾಸಣೆ ಮಾಡಿ ಕಾರ್ಖಾನೆಗೆ ಕಳುಹಿಸಲಾಗಿದೆ. ಹತ್ತಾರು ಮಂದಿಗೆ ಕೊರೊನಾ ಹರಡಿದ ನಂಜನಗೂಡಿನ ಜ್ಯೂಬಿಲಿಯಂಟ್ ಪ್ರಕರಣ ನಮ್ಮ ಕಣ್ಮುಂದೆಯೇ ಇರುವಾಗ ತಮಿಳುನಾಡಿನ ಕಾರ್ಮಿಕರನ್ನು ಕರೆಸಿಕೊಂಡಿದ್ದು ಎಷ್ಟು ಸರಿ ಹಾಗು ಜಿಲ್ಲಾಡಳಿತ ಇದಕ್ಕೆ ಹೇಗೆ ಅವಕಾಶ ಮಾಡಿಕೊಟ್ಟಿತ್ತು ಎಂದು ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.