ಕೋವಿಡ್ ಸೋಂಕಿಗೆ ಗಡಿ ಜಿಲ್ಲೆಯಲ್ಲಿ ಶಿಕ್ಷಕ ಸಮುದಾಯ ದೊಡ್ಡ ಬೆಲೆ ತೆತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 90 ಶಿಕ್ಷಕರು ಕೋವಿಡ್ ಸೋಂಕಿಗೆ ಶಿಕಾರಿಯಾಗಿದ್ದಾರೆ.
ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಮೊದಲ ಅಲೆಯಲ್ಲಿ 23, ಎರಡನೇ ಅಲೆಯಲ್ಲಿ 20 ಶಿಕ್ಷಕರು ಬಲಿಯಾಗಿದ್ದಾರೆ. ಹತ್ತು ಶಿಕ್ಷಕರು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದವರಾಗಿದ್ದವರು ಎಂದು ಸರಕಾರಕ್ಕೆ ಮಾಹಿತಿ ಸಲ್ಲಿಸಲಾಗಿದೆ ಎಂದು ಬೆಳಗಾವಿ ಡಿಡಿಪಿಐ ಆನಂದ ಪುಂಡಲೀಕ ಅವರು “ಜನ ಜೀವಾಳ”ಕ್ಕೆ ಮಾಹಿತಿ ನೀಡಿದ್ದಾರೆ.
ಇನ್ನು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಮೊದಲ ಅಲೆಯಲ್ಲಿ 18, ಎರಡನೇ ಅಲೆಯಲ್ಲಿ 29 ಶಿಕ್ಷಕರು ಮೃತಪಟ್ಟಿರುವ ಸಂಗತಿ ಯನ್ನು ಗಜಾನನ ಮನ್ನಿಕೇರಿ ಜನಜೀವಾಳ ಕ್ಕೆ ತಿಳಿಸಿದ್ದಾರೆ.
ಬಿಇಒ, ಬಿಆರ್ ಸಿ, ಸಿಆರ್ ಪಿಗಳ ಮೂಲಕ ಶಿಕ್ಷಕರಿಗೆ ನಿರಂತರವಾಗಿ ಲಸಿಕೆ ಬಗ್ಗೆ ಜಾಗತಿ ಮೂಡಿಸುವ ಕೆಲಸವಾಗಿದೆ. ಅವಶ್ಯವಿದ್ದರೆ ಮಾತ್ರ ಮನೆಯಿಂದ ಹೊರಬನ್ನಿ ಎಂದು ಸೂಚನೆ ನೀಡಲಾಗುತ್ತಿದೆ. ಕೋವಿಡ್ ಕಾರಣಕ್ಕೆ ಶಾಲೆಗಳು ಬಂದ್ ಆಗಿವೆ. ಆದರೆ ಶಿಕ್ಷಕರನ್ನೇ ಕೋವಿಡ್ ಹೆಚ್ಚಿನ ಸಂಖ್ಯೆಯಲ್ಲಿ ಬಲಿತೆಗೆದುಕೊಂಡಿರುವುದು ಮಾತ್ರ ಶೋಚನೀಯ.
ಕೆಲ ಸೋಂಕು ತಗುಲಿದ ಶಿಕ್ಷಕರು ಹೋಂ ಐಸೊಲೇಷನ್ ನಲ್ಲಿದ್ದರೆ ಇನ್ನೂ ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಎಸ್ಎಸ್ಎಲ್ಸಿ ಪರೀಕ್ಷೆ ಮುಂದಕ್ಕೆ ಹಾಕಲಾಗಿದೆ. SSLC ಮಕ್ಕಳಿಗಾಗಿ ಮಿಶನ್ 25 ಮಾಡಿದ್ದೇವೆ, ವಿಶೇಷ ಬೋಧನೆ ಮಾಡಿದ್ದೇವೆ, ಮಕ್ಕಳನ್ನು ಚಟುವಟಿಕೆಯಿಂದ ಇರಿಸಲು ಎಲ್ಲ ವ್ಯವಸ್ಥೆ ಮಾಡಿದ್ದೇವೆ. ಇನ್ನು ಪಾಸಾದ ಉಳಿದ ತರಗತಿ ಮಕ್ಕಳೆಲ್ಲ ಮುಂದಿನ ತರಗತಿಗೆ ದಾಖಲಾದಂತೆಯೇ ಆಗಿದೆ. ಅನುದಾನಿತ ಶಾಲೆಗಳಲ್ಲೂ ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ಕ್ರಮ ಕೈಗೊಳ್ಳಲಾಗಿದೆ. ತುರ್ತು ಸ್ಥಿತಿಯಲ್ಲಿ ಶಿಕ್ಷಕರು, ಮಕ್ಕಳು, ಪಾಲಕರು ಎಚ್ಚರಿಕೆಯಿಂದ ಇರಬೇಕೆಂದು ಡಿಡಿಪಿಐ ಎ.ಬಿ.ಪುಂಡಲೀಕ ತಿಳಿಸಿದ್ದಾರೆ.
ಒಟ್ಟಾರೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಶಿಕ್ಷಕರನ್ನು ಕೊರೋನಾ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಬಲಿತೆಗೆದು ಕೊಂಡಿರುವುದು ಶಿಕ್ಷಕರು ಹಾಗೂ ಅವರನ್ನು ಅವಲಂಬಿಸಿರುವ ಕುಟುಂಬ ವರ್ಗದಲ್ಲಿ ಆತಂಕ ಮೂಡಿಸಿದೆ. ಜತೆಗೆ ಉಪ ಚುನಾವಣೆ ಯಲ್ಲಿ ಪಾಲ್ಗೊಂಡ ಶಿಕ್ಷಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಾಧಿಸಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ.