ಬೆಂಗಳೂರು: ದಿನ ಕಳೆದಂತೆ ಕೊರೊನಾ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದ್ದು, ಹಣ ಉಳಿಸಲು ಕ್ವಾರಂಟೈನ್ ಮಾಡುವವರನ್ನು ಅಂಬುಲೆನ್ಸ್ ಗಳಲ್ಲಿ ಕುರಿ ತುಂಬಿದಂತೆ ತುಂಬಲಾಗುತ್ತಿದೆ.
ಕೊರೊನಾ ಜೀವನದ ಅಂಗ, ನಾವು ಕೊರೊನಾ ಜೊತೆಯಲ್ಲಿಯೇ ಬದುಕಬೇಕು ಎಂದು ಹೇಳುವ ಸರ್ಕಾರ, ಇದೇ ರೀತಿ ವರ್ತಿಸುತ್ತಿದೆ. ದಿನ ಕಳೆದಂತೆ ಮಹಾಮಾರಿ ವಿಚಾರದಲ್ಲಿ ದಿವ್ಯ ನಿರ್ಲಕ್ಷ್ಯ ವಹಿಸುತ್ತಿದೆ. ಇದರಿಂದಾಗಿ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಮಹಾರಾಷ್ಟ್ರದ ರೀತಿಯಾದರೆ ಏನು ಗತಿ ಎಂಬ ಆತಂಕ ಹುಟ್ಟಿಕೊಂಡಿದೆ.
ಕ್ವಾರಂಟೈನ್ ಮಾಡಲು, ಸೋಂಕಿತನ ಕರೆದುಕೊಂಡು ಹೋಗಲು ಈ ಹಿಂದೆ ಅಂಬುಲೆನ್ಸ್ ಹಾಗೂ ಟೆಂಪೋ ಟ್ರಾವೆಲರ್ ಎರಡನ್ನೂ ಬಳಸಲಾಗುತ್ತಿತ್ತು. ಆದರೆ ಇದೀಗ ಟೆಂಪೋ ಟ್ರಾವೆಲರ್ ಗಳನ್ನು ಕೈ ಬಿಡಲಾಗಿದೆ. ಎಲ್ಲದಕ್ಕೂ ಅಂಬುಲೆನ್ಸ್ ಗಳನ್ನೇ ಬಳಸಲಾಗುತ್ತಿದೆ. ಹೀಗಾಗಿ ಎಡವಟ್ಟಾಗುತ್ತಿದ್ದು, ಅಂಬುಲೆನ್ಸ್ ನಲ್ಲಿ ಕುರಿ ತುಂಬಿದಂತೆ ಹತ್ತಾರು ಜನರನ್ನು ತುಂಬಲಾಗುತ್ತಿದೆ.
ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ 21 ಜನರನ್ನು ಕ್ವಾರಂಟೈನ್ ಮಾಡಲು 3 ಅಂಬ್ಯುಲೆನ್ಸ್ ಬಳಕೆ ಮಾಡಲಾಗಿದ್ದು, ಸ್ವತಃ ಆರೋಗ್ಯಾಧಿಕಾರಿಗಳು ಈ ರೀತಿ ತುಂಬಿಸಿದ್ದಾರೆ.
ಟೆಂಪೋ ಟ್ರಾವೆಲರ್ ಬಳಕೆಯಿಂದಾಗಿ ವಾಹನಕ್ಕೆ ಬಾಡಿಗೆ ನೀಡಬೇಕಿತ್ತು. ಇದಕ್ಕಾಗಿ ತಿಂಗಳಿಗೆ ಒಂದೂವರೆ ಲಕ್ಷ ಬಾಡಿಗೆ ಕೊಡಬೇಕಿತ್ತು. ಇದೀಗ ಈ ವಾಹನಗಳ ಬದಲಾಗಿ ಅಂಬುಲೆನ್ಸ್ ಗಳನ್ನೇ ಬಳಸಲಾಗುತ್ತಿದ್ದು, ಕ್ವಾರಂಟೈನ್ ಮಾಡುವವರನ್ನು ಅಂಬುಲೆನ್ಸ್ ನಲ್ಲಿ ಕುರಿ ತುಂಬಿದಂತೆ ತುಂಬಲಾಗುತ್ತಿದೆ. ಈ ಮೂಲಕ ಸರ್ಕಾರ ಹಣ ಉಳಿಸುವ ಪ್ಲಾನ್ ಮಾಡುತ್ತಿದೆ.