ಬೆಳಗಾವಿ: ಅನಧಿಕೃತ ಪ್ರಾರ್ಥನಾ ಮಂದಿರಗಳನ್ನು ತೆರವುಗೊಳಿಸುವ ವಿಚಾರವಾಗಿ ರಾಜ್ಯದಲ್ಲಿ ಸದ್ಯ ಚರ್ಚೆ ಮತ್ತು ಗೊಂದಲ ಸೃಷ್ಟಿಯಾಗಿದೆ. ಅದರಂತೆ ಹಳೆ ಬೆಳಗಾವಿ ಹೊರ ವಲಯದಲ್ಲಿರುವ ಎಂಬತ್ತು ವರ್ಷಕ್ಕೂ ಹಿಂದಿನ ಆಂಜನೇಯ ದೇವಸ್ಥಾನವನ್ನು ಸುಪ್ರೀಂಕೋರ್ಟ್ ತೆರವುಗೊಳಿಸಲು ತಿಳಿಸಿದೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಡಳಿತದ ಸಂದರ್ಭದಲ್ಲಿ ದೇವಸ್ಥಾನ ತೆರವು ಮಾಡಲು ಆದೇಶ ನೀಡಲಾಗಿತ್ತು. ಆದರೆ ಆದೇಶವಿದ್ದರೂ ಹೋರಾಟ ಮಾಡಿ ಸ್ಥಳೀಯರು ಮತ್ತು ಹಿಂದೂಪರ ಕಾರ್ಯಕರ್ತರು ಉಳಿಸಿಕೊಂಡಿದ್ದರು. ಎಂಟು ವರ್ಷದ ಹಿಂದೆ ಹೋರಾಡಿ ದೇವಸ್ಥಾನ ತೆರವಾಗದಂತೆ ನೋಡಿಕೊಂಡಿದ್ದ ಸ್ಥಳೀಯರು, ಈಗ ಮತ್ತೆ ದೇವಸ್ಥಾನ ತೆರವುಗೊಳ್ಳುವ ಭೀತಿ ಎದುರಿಸುವಂತಾಗಿದೆ.
ಧಾರವಾಡ: ಹುಬ್ಬಳ್ಳಿಯ ಉಣಕಲ್ ಕ್ರಾಸ್ ಬಳಿಯಿರುವ ರಾಮಲಿಂಗೇಶ್ವರ ದೇವಾಲಯದ ಭಕ್ತರಲ್ಲಿ ಆತಂಕ
ಅನಧಿಕೃತ ಪ್ರಾರ್ಥನಾ ಮಂದಿರಗಳನ್ನು ತೆರವುಗೊಳಿಸುವ ಸುಪ್ರೀಂಕೋರ್ಟ್ ಆದೇಶ ಹಿನ್ನೆಲೆ, ಅವಳಿ ನಗರದ ಭಕ್ತರಲ್ಲಿ ಆತಂಕ ಶುರುವಾಗಿದೆ. ಧಾರವಾಡ ಜಿಲ್ಲೆಯಲ್ಲಿ 324 ಮಂದಿರ ಮಸೀದಿ ತೆರವುಗೊಳಿಸಲು ಆದೇಶ ನೀಡಲಾಗಿದೆ. ಈಗಾಗಲೇ 43 ಧಾರ್ಮಿಕ ಕಟ್ಟಡಗಳನ್ನು ಜಿಲ್ಲಾಡಳಿತ ತೆರವುಗೊಳಿಸಿದೆ. ಆದರೆ ಈಗ 281 ಅನಧಿಕೃತವಾಗಿರುವ ಪ್ರಾರ್ಥನಾ ಮಂದಿರ ತೆರವುಗೊಳಿಸುವುದೇ ದೊಡ್ಡ ಸವಾಲಾಗಿದೆ.
ಹುಬ್ಬಳ್ಳಿಯ ಉಣಕಲ್ ಕ್ರಾಸ್ ಬಳಿಯಿರುವ ರಾಮಲಿಂಗೇಶ್ವರ ದೇವಾಲಯದ ಭಕ್ತರಲ್ಲಿ ಆತಂಕ ಶುರುವಾಗಿದೆ. ಇದು ಪುರಾತನ ಕಾಲದ ಸ್ವಯಂಭು ಲಿಂಗವಾಗಿದ್ದು, ಬಿಆರ್ಟಿಸಿ ಮೇಲ್ಸೇತುವೆ ಕಾಮಗಾರಿ ಸಮಯದಲ್ಲು ತೆರವುಗೊಳ್ಳದ ಗುಡಿ, ಸುಪ್ರೀಂಕೋರ್ಟ್ ಆದೇಶ ಹಿನ್ನೆಲೆಯಲ್ಲಿ ತೆರವಿನ ಬಗ್ಗೆ ಆಡಳಿತ ಮಂಡಳಿಯಿಂದ ಚರ್ಚೆಯಾಗುತ್ತಿದೆ.
ಅಶ್ವತ್ಥಾಮ ದೇವಸ್ಥಾನಕ್ಕೂ ತೆರವು ಆತಂಕ ಶುರು
ಹತ್ತು ವರ್ಷಗಳ ಹಿಂದೆ ರಸ್ತೆ ಅಗಲೀಕರಣ ವೇಳೆ ಬೆಳಗಾವಿ ಹೃದಯ ಭಾಗದಲ್ಲಿರುವ ಪಾಂಗಳುಗಲ್ಲಿಯ ಅಶ್ವತ್ಥಾಮ ದೇವಸ್ಥಾನ ತೆರುವಿಗೆ ಜಿಲ್ಲಾಡಳಿತ ಮುಂದಾಗಿದ್ದಾಗ ಸ್ಥಳೀಯರು ಹೋರಾಟ ಮಾಡಿ ದೇವಸ್ಥಾನ ಉಳಿಸಿಕೊಂಡಿದ್ದರು. ಇದೀಗ ಮತ್ತೆ ತೆರವುಗೊಳ್ಳುವ ಭೀತಿಯಲ್ಲಿ ಅಶ್ವತ್ಥಾಮ ದೇವಸ್ಥಾನ ಭಕ್ತರು ಕಾಲ ಕಳೆಯುವಂತಾಗಿದೆ. 150ಕ್ಕೂ ಅಧಿಕ ಇತಿಹಾಸ ಹೊಂದಿರುವ ದೇವಸ್ಥಾನ ಇದಾಗಿದೆ.