ಬೆಂಗಳೂರು, ನವೆಂಬರ್ 05: ಬೆಂಗಳೂರು ಸೇರಿದಂತೆ ರಾಜ್ಯದ 9 ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಗುರುವಾರ ಸಂಜೆ ಸುರಿದ ಮಳೆಗೆ ಬೆಂಗಳೂರು ತೊಯ್ದು ತೊಪ್ಪೆಯಾಗಿದೆ, ಮಳೆ ನಿಂತು ಅರ್ಧ ದಿನ ಕಳೆದಿದ್ದರೂ ರಸ್ತೆಯಲ್ಲಿ ನಿಂತಿರುವ ನೀರಿನ್ನೂ ಆರಿಲ್ಲ.
ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಗುರುವಾರ ರಾತ್ರಿ ಎರಡು ಗಂಟೆಗೂ ಅಧಿಕ ಕಾಲ ಬೆಂಗಳೂರಿನಲ್ಲಿ ಮಳೆಯಾಗಿದ್ದು. ರಸ್ತೆಗಳ ಮೇಲೆ ನೀರು ಹೊಳೆಯಂತೆ ಹರಿದು ಬರುವ ದೃಶ್ಯ ಕಂಡು ಬಂತು. ಮೆಜೆಸ್ಟಿಕ್, ಶಾಂತಿನಗರ, ವಿಧಾನಸೌಧ, ರಾಜಾಜಿ ನಗರ, ಮತ್ತಿಕೆರೆ, ಯಶವಂತಪುರ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದೆ. ಇನ್ನು ಮಳೆಗೆ ರಸ್ತೆಗಳು ಕೊಚ್ಚಿ ಹೋಗಿವೆ.
ಗುರುವಾರ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭಾರೀ ಮಳೆಯಾಗಿದೆ, ಬೆಳ್ತಂಗಡಿ, ಪುತ್ತೂರು ತಾಲೂಕಿನ ಹಲವೆಡೆ ಎಡೆಬಿಡದೇ ಸುರಿದಿದ್ದು, ಕೃಷಿ ಭೂಮಿ ಮತ್ತು ತೋಟಗಳಿಗೆ ಮಳೆ ನೀರು ನುಗ್ಗಿದ್ದರಿಂದ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇದೇ ರೀತಿ ಮುಂದಿನ ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಇನ್ನೂ ಕಳೆದ ಎರಡ್ಮೂರು ದಿನಗಳಿಂದ ಬೆಣ್ಣೆ ನಗರಿ ದಾವಣಗೆರೆಯಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಬುಧವಾರ ಸುರಿದ ಬಿರುಗಾಳಿ ಸಹಿತ ಮಳೆಗೆ 40 ಎಕರೆ ಭತ್ತ ನಾಶವಾಗಿದೆ. ದಾವಣಗೆರೆ ತಾಲೂಕಿನ ಶಾಗಲೆ ಗ್ರಾಮದ 20ಕ್ಕೂ ಅಧಿಕ ರೈತರ ಭತ್ತ ನಾಶಗೊಂಡು ನೆಲ ಕಚ್ಚಿದೆ.
ಇನ್ನು ಒಂದು ವಾರದಲ್ಲಿ ಭತ್ತ ಕಟಾವು ಮಾಡಲು ರೈತರು ಸಿದ್ಧತೆ ನಡೆಸಿದ್ದರು. ರೈತರು ಎಕರೆ ಭತ್ತಕ್ಕೆ ಸುಮಾರು 25 ರಿಂದ 30 ಸಾವಿರ ರೂಪಾಯಿ ಹಣ ಖರ್ಚು ಮಾಡಿದ್ದರು, ಇದೀಗ ಬೆಳೆ ಸಂಪೂರ್ಣ ನೆಲ ಕಚ್ಚಿದ್ದು, ಸರ್ಕಾರ ರೈತರ ಸಹಾಯಕ್ಕೆ ಮುಂದಾಗಬೇಕಿದೆ ಎಂದು ಅನ್ನದಾತರು ಆಗ್ರಹಿಸಿದ್ದಾರೆ.
ಇನ್ನು ಕೇರಳದ ಕೇರಳದ ಐದು ಜಿಲ್ಲೆಗಳಾದ ತಿರುವನಂತಪುರಂ, ಕೊಲ್ಲಂ, ಪಟ್ಟಣಂತಿಟ್ಟ, ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು IMD ಮುನ್ಸೂಚನೆ ನೀಡಿದೆ.
ತಮಿಳುನಾಡು, ಕರ್ನಾಟಕ, ಕೇರಳ ಮತ್ತು ಮಾಹೆಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಈಗಾಗಲೇ ತಮಿಳುನಾಡಿನ ಚೆನ್ನೈ, ತಿರುವೆಲ್ಲೂರು, ಚೆಂಗಲ್ಪಟ್ಟು, ಕಾಂಚಿಪುರಂ, ಪುದುಕೊಟ್ಟಾಯ್, ಅರಿಯಾಲೂರ್, ಪೆರಂಬಲೂರು, ತಿರುಚಿ, ಕುಡ್ಡಲೋರ್, ವಿಳುಪುರಂ, ಕಲ್ಲಕುರಿಚಿ, ತಾಂಜಾವೂರು, ತಿರುವರೂರು, ವೆಲ್ಲೂರು, ತಿರುಪತ್ತೂರ್, ನಮಕ್ಕಲ್, ಕರೂರು, ನಾಗಪತ್ತಿನಂ, ಮಯಿಲಾದುತುರೈ ಹಾಗೂ ರಾಣಿಪೇಟೆಯಲ್ಲಿ ಶಾಲೆಗಳಿಗೆ ರಜೆ ಘೋಸಷಿಲಾಗಿದೆ.
ಮಳೆಯಾಗಿರುವ ಪ್ರದೇಶಗಳು
ಅಕ್ಕಿಆಲೂರು, ಜಯಪುರ, ಬೆಂಗಳೂರು, ಸಕಲೇಶಪುರ, ಪಾವಗಡ, ಚಿಕ್ಕಮಗಳೂರು, ಕಾರ್ಕಳ, ಕೋಟಾ, ಮೂಡುಬಿದಿರೆ, ಬಾಳೆಹೊನ್ನೂರು, ಭಾಗಮಂಡಲ, ಧರ್ಮಸ್ಥಳ, ಉಡುಪಿ, ಕೊಲ್ಲೂರು, ಸಿದ್ದಾಪುರ, ಬ್ರಹ್ಮಾವರ, ಹಾನಗಲ್, ಆಗುಂಬೆ, ಅಗ್ರಹಾರ ಕೋಣಂದೂರು, ದಾವಣಗೆರೆಯಲ್ಲಿ ಮಳೆಯಾಗಿದೆ.
ಬೆಂಗಳೂರು ವಾತಾವರಣ ಹೇಗಿದೆ?
ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, ಸಂಜೆಯ ಹೊತ್ತಿಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ.
27 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಎಚ್ಎಎಲ್ನಲ್ಲಿ 25.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಬೆಂಗಳೂರು ನಗರದಲ್ಲಿ 26.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ 20.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 27.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಮಳೆಯ ಅಬ್ಬರ ಜೋರು
ಬೆಂಗಳೂರಿನ ಪ್ರಮುಖ ಸ್ಥಳಗಳಾದ ಮೆಜೆಸ್ಟಿಕ್, ಶಾಂತಿನಗರ, ಮಲ್ಲೇಶ್ವರಂ, ವಿದ್ಯಾರಣ್ಯಪುರಂ, ಹೊಸಕೆರೆಹಳ್ಳಿ, ಬ್ಯಾಂಕ್ ಕಾಲೋನಿ, ಹನುಮಂತನಗರ, ಎಂಜಿ ರಸ್ತೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರಿ ಮಳೆ ಬಂದು ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಹೊಸಕೆರೆ ಹಳ್ಳಿಯ ಸಮೀಪ ಜಲಾವೃತಗೊಂಡಿದ್ದು, ರಸ್ತೆಯಲ್ಲಿಯೇ ಕೃತಕ ಜಲಪಾತ ಸೃಷ್ಟಿಯಾಗಿದೆ. ಚಾಮರಾಜಪೇಟೆ, ಮಾರ್ಕೆಟ್, ಸೀತಾ ಸರ್ಕಲ್ ಬಳಿ ರಸ್ತೆಯಲ್ಲಿಯೇ ಒಂದು ಅಡಿಗಿಂತಲೂ ಹೆಚ್ಚು ನೀರು ನಿಂತಿದೆ ಎಂದು ಕೆಲವರು ತಿಳಿಸಿದ್ದಾರೆ.
ವಾಹನದಲ್ಲಿ ತೆರಳುತ್ತಿದ್ದ ಹಲವರು ಮಂದಿ ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಮೈಸೂರು ರಸ್ತೆ, ಲಾಲ್ಬಾಗ್ ರಸ್ತೆಯ ಸುತ್ತಮುತ್ತಲೂ ಭಾರಿ ಮಳೆಯಾಗಿದ್ದು, ಕೃತಕ ನದಿಯಂತೆ ಸೃಷ್ಟಿಯಾಗಿತ್ತು.
ನಾಯಂಡಹಳ್ಳಿ, ಹೊಸಕೆರೆಹಳ್ಳಿ ಸೇರಿದಂತೆ ಕೆಲವು ತಗ್ಗು ಪ್ರದೇಶಗಳಲ್ಲಿ ವಾಹನಗಳು ನೀರಿನಲ್ಲಿ ಸಿಲುಕಿಕೊಂಡು ಪ್ರಯಾಣಿಕರು ತೀವ್ರ ಪರದಾಟ ಅನುಭವಿಸಿದರು.
ತಮಿಳುನಾಡಿನಲ್ಲೂ ಮಳೆ