ನೋಟು ಅಮಾನ್ಯೀಕರಣಗೊಂಡು ಬರೋಬ್ಬರಿ ಐದು ವರ್ಷಗಳೇ ಕಳೆದಿವೆ. ಆದರೆ ಗೋವಿಂದಪುರದಲ್ಲಿ ಅಮಾನ್ಯೀಕರಣಗೊಂಡ ನೋಟು ವಿನಿಮಯ ಹಾಗೂ ನಕಲಿ ಹಣವನ್ನು ಉತ್ಪಾದಿಸುತ್ತಿದ್ದ ಆರೋಪದ ಅಡಿಯಲ್ಲಿ ಪೊಲೀಸರು ಬಿಬಿಎಂಪಿ ಉಪ ಗುತ್ತಿಗೆದಾರ ಸೇರಿದಂತೆ ಐವರನ್ನು ಬಂಧಿಸಿದ್ದಾರೆ.
ಬಟ್ಟೆ ವ್ಯಾಪಾರಿಗಳಾದ ಸುರೇಶ್ ಕುಮಾರ್(32), ರಾಮಕೃಷ್ಣ(32), ವೆಂಕಟೇಶ್ ಎಂ(53), ಮಂಜುನಾಥ್(43), ಹಾಗೂ ದಯಾನಂದ ಎಂಬವರು ಹೆಚ್ಬಿಆರ್ ಲೇ ಔಟ್ ನಲ್ಲಿ ಬರೋಬ್ಬರಿ 35 ಲಕ್ಷ ರೂಪಾಯಿ ಮೌಲ್ಯದ ಅಮಾನ್ಯೀಕರಣಗೊಂಡ 500 ಹಾಗೂ 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹೊಂದಿದ್ದರು ಎನ್ನಲಾಗಿದೆ.
ಕುಮಾರ್ ಕೆ.ಆರ್. ಪುರಂ ನಿವಾಸಿಯಾಗಿದ್ದರೆ ರಾಮಕೃಷ್ಣ ರಾಜಾಜಿನಗರ ನಿವಾಸಿಯಾಗಿದ್ದಾರೆ. ವೆಂಕಟೇಶ್ ಬಿಬಿಎಂಪಿ ಉಪಗುತ್ತಿಗೆದಾರನಾಗಿ ಸೇವೆ ಸಲ್ಲಿಸುತ್ತಿದ್ದರು. ಹೊಂಗಸಂದ್ರದ ನಿವಾಸಿ ಹಾಗೂ ಕೃಷಿಕ ದಯಾನಂದ, ಆನೇಕಲ್ನ ನಿವಾಸಿ ಮಂಜುನಾಥ ಕೃಷಿಕನಾಗಿದ್ದರು.
ಆರೋಪಿಗಳು ಅಮಾನ್ಯೀಕರಣಗೊಂಡ ನೋಟುಗಳನ್ನು ಅದರ ಬೆಲೆಯ 35 ಪ್ರತಿಶತಕ್ಕೆ ವಿನಿಮಯ ಮಾಡಿಕೊಳ್ಳಲು ಯತ್ನಿಸಿದ್ದರು. ಒಟ್ಟು 80 ಲಕ್ಷ ರೂಪಾಯಿ ಮೌಲ್ಯದ ಅಮಾನ್ಯೀಕರಣಗೊಂಡ ನೋಟುಗಳ ಜೊತೆಗೆ 5 ಕೋಟಿ ರೂಪಾಯಿ ಮೌಲ್ಯದ ನೋಟುಗಳ ಕಲರ್ ಕಾಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಕ್ಟೋಬರ್ 10ರಂದು ವೆಂಕಟೇಶ್, ಮಂಜುನಾಥ್ ಹಾಗೂ ದಯಾನಂದ ಹೆಚ್ಬಿಆರ್ ಲೇ ಔಟ್ಗೆ ಆಗಮಿಸಿ ನೋಟು ಎಕ್ಸ್ಚೇಂಜ್ ಮಾಡಲು ಮುಂದಾಗಿದ್ದರು. ಆದರೆ ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ 45 ಲಕ್ಷ ರೂಪಾಯಿ ವಶಕ್ಕೆ ಪಡೆದಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಕುಮಾರ್ ಹಾಗೂ ರಾಮಕೃಷ್ಣ ಅಮಾನ್ಯೀಕರಣಗೊಂಡ ನೋಟುಗಳನ್ನು ಅದರ 35 ಪ್ರತಿಶತ ಬೆಲೆಗೆ ಮಾರಾಟ ಮಾಡಿಕೊಡುವುದಾಗಿ ಹೇಳಿದ್ದರು ಎನ್ನಲಾಗಿದೆ. ಇದೇ ಮಾತನ್ನು ನಂಬಿ ಈ ಮೂವರು ಹೆಚ್ಬಿಆರ್ ಲೇ ಔಟ್ಗೆ ಆಗಮಿಸಿದ್ದರು ಎನ್ನಲಾಗಿದೆ.
ಇನ್ಸ್ಪೆಕ್ಟರ್ ಸಿ. ಪ್ರಕಾಶ್ ನೇತೃತ್ವದ ಪೊಲೀಸ್ ತಂಡ ಕುಮಾರ್ ಹಾಗೂ ರಾಮಕೃಷ್ಣರನ್ನು ಬಂಧಿಸಿ 35 ಲಕ್ಷ ರೂಪಾಯಿ ಅಮಾನ್ಯೀಕರಣಗೊಂಡ ನೋಟುಗಳನ್ನು ವಶಕ್ಕೆ ಪಡೆದಿದೆ. ಈ ಇಬ್ಬರೂ ಕೇರಳದಲ್ಲಿ ಈ ರೀತಿಯ ನೋಟುಗಳನ್ನು ಖರೀದಿಸುವವರು ಇದ್ದಾರೆ ಎಂದು ಹೇಳಿದ್ದಾರೆ. ಕೂಡಲೇ ಫಾರ್ಮ್ಹೌಸ್ಗೆ ತೆರಳಿದ ಪೊಲೀಸರು 25 ಲಕ್ಷ ರೂಪಾಯಿ ಅಮಾನ್ಯೀಕರಣಗೊಂಡ ನೋಟುಗಳು ಹಾಗೂ ಫೋಟೋಕಾಪಿಯನ್ನು ಜಪ್ತಿ ಮಾಡಿದ್ದಾರೆ.