ಬೆಂಗಳೂರು, ಮೇ 6: ಎರಡು ದಿವಸಗಳ ಹಿಂದೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ನಗರದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಕೊರೋನಾ ರೋಗಿಗಳ ಬೆಡ್ ಬ್ಲಾಕಿಂಗ್ ಅಕ್ರಮ ದಂಧೆಯನ್ನು ಬಯಲಿಗೆಳೆದಿದ್ದೇನೆಂದು ಪರಾಕ್ರಮ ಮೆರೆದಿದ್ದರು. ಆದರೆ ಈ ಅಕ್ರಮ ದಂಧೆಯಲ್ಲಿ ನೇರವಾಗಿ ಪಾಲ್ಗೊಂಡಿದ್ದ ಬೊಮ್ಮನಹಳ್ಳಿ ಬಿ ಜೆ ಪಿ ಶಾಸಕ ಸತೀಶ್ ರೆಡ್ಡಿರನ್ನೇ ಜತೆಯಲ್ಲಿಟ್ಟುಕೊಂಡು ಇಂಥ ಈ ದಂಧೆಯಲ್ಲಿ ಪಾಲ್ಗೊಂಡಿರುವ ಕೊಲೆಪಾತಕರನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದರು.
ಆದರೆ ಇಂದು ಮಾಧ್ಯಮಗಳಲ್ಲಿ ಶಾಸಕ ಸತೀಶ್ ರೆಡ್ಡಿ ನೇರ ಪಾತ್ರವಿರುವುದು ಬಯಲಾಗಿದೆ. ಈ ಬಗ್ಗೆ ಸಂಸದರು ಜನತೆಗೆ ಏನೆಂದು ಉತ್ತರ ಹೇಳುತ್ತಾರೆ ? ಶಾಸಕ ಸತೀಶ್ ರೆಡ್ಡಿ ಹಾಗೂ ಇನ್ನಿತರ ಕೊಲೆ ಪಾತಕಿಗಳನ್ನು ಪೊಲೀಸ್ ಇಲಾಖೆ ಈ ಕೂಡಲೇ ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಬೇಕು ಎಂದು ಆಮ್ ಆದ್ಮಿ ಪಕ್ಷದ ನಗರ ಉಪಾಧ್ಯಕ್ಷ ಬಿ. ಟಿ. ನಾಗಣ್ಣ ಇಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು .
ಬೆಂಗಳೂರಿನ ಎಲ್ಲಾ ವಲಯಗಳ ಸಹಾಯವಾಣಿ ಕೇಂದ್ರಗಳಲ್ಲಿ ಬಿಜೆಪಿಯ ಪ್ರಮುಖ ಮಂತ್ರಿಗಳು ಹಾಗೂ ಶಾಸಕರುಗಳ ನೇರ ಕೈವಾಡವಿದ್ದು ಎಲ್ಲರೂ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಪಾಲ್ಗೊಂಡು ಇದುವರೆವಿಗೂ ಬೆಡ್ ಸಿಗದೆ ಆಗಿರುವ ಸಾವಿರಾರು ಅಮಾಯಕ ರೋಗಿಗಳ ಸಾವಿಗೆ ನೇರ ಹೊಣೆಗಾರರಾಗಿದ್ದಾರೆಂದು ನಾಗಣ್ಣ ಆರೋಪಿಸಿದರು.
ಇಂತಹ ದೊಡ್ಡ ದುಷ್ಕೃತ್ಯಗಳಲ್ಲಿ ಪ್ರಭಾವಿಗಳ ಪಾತ್ರ ಇದ್ದೇ ಇರುತ್ತದೆ ಎಂಬುದು ಮೊದಲಿನಿಂದಲೂ ಆಮ್ ಆದ್ಮಿ ಪಕ್ಷದ ಸ್ಪಷ್ಟ ಅಭಿಪ್ರಾಯವಾಗಿತ್ತು . ಪ್ರಭಾವಿಗಳನ್ನು ರಕ್ಷಿಸಲು ಹೋಗಿ ಸಂಸದರು ಸಣ್ಣ ಸಣ್ಣ ಅಧಿಕಾರಿಗಳನ್ನು ಹಾಗೂ ಗುತ್ತಿಗೆ ನೌಕರರನ್ನು ಬಂಧಿಸಿ ಪ್ರಕರಣವನ್ನು ದಿಕ್ಕು ತಪ್ಪಿಸುವ ಹುನ್ನಾರ ಕೈಗೊಂಡಿದ್ದರು. ಆದರೆ ಈಗ ಪ್ರಭಾವಿಗಳ ಬಣ್ಣ ಬಟಾಬಯಲಾಗಿದೆ.