ಬೆಳಗಾವಿ: ಲೋಕಸಭಾ ಉಪ ಚುನಾವಣೆಯ ಮತ ಎಣಿಕೆಯು ಭಾನುವಾರ (ಮೇ.02) ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಕೋವಿಡ್-19 ಮಾರ್ಗಸೂಚಿಗಳನ್ನು ಹಾಗೂ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶನ ನೀಡಿದೆ.
ಅಭ್ಯರ್ಥಿ ಹಾಗೂ ಏಜೆಂಟರುಗಳಿಗೆ ಕೋವಿಡ್-19 ನೆಗೆಟಿವ್ ವರದಿ ಕಡ್ಡಾಯ :
ಮತ ಎಣಿಕೆ ಕೇಂದ್ರ ಪ್ರವೇಶಿಸುವ ಅಭ್ಯರ್ಥಿಗಳು ಕೊರೋನಾ ನೆಗೆಟಿವ್ ವರದಿ ಅಥವಾ ಎರಡು ಡೋಸ್ ಲಸಿಕೆ ಪಡೆದಿರುವ ಬಗ್ಗೆ ದಾಖಲೆ ಸಲ್ಲಿಸಬೇಕು. ಏಜೆಂಟರು ಕೂಡ 48 ಗಂಟೆಗಿಂತ ಹಳೆಯದಲ್ಲದ ಆರ್ ಟಿ-ಪಿಸಿಆರ್ ಟೆಸ್ಟ್ ವರದಿ ಸಲ್ಲಿಸಬೇಕು ಎಂದು ಚುನಾವಣಾ ಆಯೋಗ ನಿರ್ದೇಶನ ನೀಡಿದೆ.
ಮತ ಎಣಿಕೆ ಕೇಂದ್ರಗಳಲ್ಲಿ ಕೋವಿಡ್-19 ನಿಯಮಾವಳಿಗಳು:
ಮತ ಎಣಿಕೆ ಕೇಂದ್ರಗಳಲ್ಲಿ ಚಟುವಟಿಕೆಗಳು ಪ್ರಾರಂಭವಾಗುವ ಮೊದಲು, ಮತ ಎಣಿಕೆಯ ವೇಳೆ ಹಾಗೂ ಚಟುವಟಿಕೆಗಳು ಮುಗಿದ ನಂತರ ಕೇಂದ್ರಗಳನ್ನು ಸಾನಿಟೈಜ್ ಮಾಡುವ ಮೂಲಕ ಸೋಂಕು ರಹಿತವಾಗಿಸಬೇಕು.
ಸೀಲ್ ಮಾಡಲಾದ ಇ.ವಿ.ಎಮ್. ಮತ್ತು ವಿವಿಪ್ಯಾಟ್ ಗಳ ಪೆಟ್ಟಿಗೆಗಳನ್ನು ಸಾನಿಟೈಜ್ ಅಥವಾ ಸೋಂಕು ರಹಿತವಾಗಿಸಬೇಕು.
ಮತ ಎಣಿಕೆ ಕೇಂದ್ರದ ಕೊಠಡಿಗಳಲ್ಲಿ, ಕೊಠಡಿಯ ಅಳತೆಗೆ ಅನುಗುಣವಾಗಿ ಹೆಚ್ಚಿನ ಸಂಖ್ಯೆಯ ಮೇಜುಗಳ ವ್ಯವಸ್ಥೆ ಮಾಡಬೇಕು. ಒಂದು ಕ್ಷೇತ್ರದ ಮತ ಎಣಿಕೆಗಾಗಿ 3-4 ಕೊಠಡಿಗಳ ವ್ಯವಸ್ಥೆ ಮಾಡಿ, ಹೆಚ್ಚುವರಿ ಎ.ಆರ್.ಒ. ಅಧಿಕಾರಿಗಳ ನೇಮಕ ಮಾಡಬೇಕು ಎಂದು ಆಯೋಗವು ತಿಳಿಸಿದೆ.
ಯಾವುದೇ ಕೊಠಡಿ, ಆವರಣ ಪ್ರವೇಶಿಸುವ ಮೊದಲು ಥರ್ಮಲ್ ಸ್ಕ್ಯಾನಿಂಗ್ ಮಾಡುವುದು ಕಡ್ಡಾಯವಾಗಿರುತ್ತದೆ. ಕೈಗಳ ಶುದ್ಧತೆಗಾಗಿ ಸಾನಿಟೈಜರ್, ಸೋಪ್ ಹಾಗೂ ನೀರಿನ ವ್ಯವಸ್ಥೆ ಮಾಡಬೇಕು.
ಅಲ್ಲದೇ, ಕೆಮ್ಮು, ನೆಗಡಿ, ಜ್ವರ ಮುಂತಾದ ಕೋವಿಡ್-19 ರೋಗಲಕ್ಷಣಗಳನ್ನು ಹೊಂದಿದ ವ್ಯಕ್ತಿಗೆ ಮತ ಎಣಿಕೆ ಕೇಂದ್ರವನ್ನು ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಚುನಾವಣಾ ಆಯೋಗ ಆದೇಶಿಸಿದೆ.
ಅಭ್ಯರ್ಥಿಗಳು ನೇಮಿಸಿರುವ ಏಜೆಂಟ್ ಗಳ ಕೋವಿಡ್ ವರದಿಯು ಪಾಸಿಟಿವ್ ಇದ್ದಲ್ಲಿ, ಬೇರೆ ಎಜೆಂಟ್ ಗಳನ್ನು ನೇಮಿಸಬೇಕು.
ಮತ ಎಣಿಕಾ ಕೊಠಡಿಗಳಲ್ಲಿ ಹಾಗೂ ನಿಯೋಜಿತ ಸಿಬ್ಬಂದಿ/ ಏಜೆಂಟ್ ಗಳು ಕೋವಿಡ್ -19 ಮಾರ್ಗಸೂಚಿಯಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿರುತ್ತದೆ.
ಅಭ್ಯರ್ಥಿಗಳು ಹಾಗೂ ಏಜೆಂಟ್ ಗಳಿಗೆ ಪಿಪಿಇ ಕಿಟ್ ವ್ಯವಸ್ಥೆ ಮಾಡಬೇಕು. ಪ್ರತಿ ಇಬ್ಬರು ಏಜೆಂಟ್ ಗಳಲ್ಲಿ ಒಬ್ಬರು ಪಿಪಿಇ ಕಿಟ್ ಧರಿಸಬೇಕು.
ನಿಯೋಜಿಸಲಾದ ಎಲ್ಲ ಮತ ಎಣಿಕಾ ಸಿಬ್ಬಂದಿಗಳಿಗೆ ಮಾಸ್ಕ್, ಸಾನಿಟೈಜರ್, ಫೇಸ್ – ಶೀಲ್ಡ್ ಮತ್ತು ಗ್ಲೌಸ್ ನೀಡಬೇಕು.
ಪೋಸ್ಟಲ್ ಬ್ಯಾಲೆಟ್ ಗಳ ಮತ ಎಣಿಕೆಗಾಗಿ ಹೆಚ್ಚುವರಿ ಎ.ಆರ್.ಒ. ಅಧಿಕಾರಿಗಳ ನೇಮಕ ಮಾಡಿಕೊಳ್ಳಬಹುದು. ಅಗತ್ಯವಿದ್ದಲ್ಲಿ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಿಕೊಳ್ಳಬಹುದು.
ಮಾಸ್ಕ್, ಪಿಪಿಇ ಕಿಟ್,ಗ್ಲೌಸ್ ಮುಂತಾದ ಪರಿಕರಗಳ ವಿಲೇವಾರಿಯನ್ನು ಸರ್ಕಾರದ ನಿರ್ದೇಶನದಂತೆ ಮಾಡಬೇಕು.
ಕೋವಿಡ್-19 ಮಾರ್ಗಸೂಚಿಗಳ ಪಟ್ಟಿಯನ್ನು ಪ್ರವೇಶ ದ್ವಾರ, ಮತ ಎಣಿಕಾ ಕೊಠಡಿಗಳಲ್ಲಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಪ್ರಕಟಿಸಬೇಕು ಎಂದು ಚುನಾವಣಾ ಆಯೋಗ ಮಾರ್ಗಸೂಚಿಯಲ್ಲಿ ತಿಳಿಸಿದೆ.
ಮತ ಎಣಿಕಾ ಕೇಂದ್ರದಗಳಿಗೆ ಪ್ರವೇಶ ಮಿತಿ:
ಮತ ಎಣಿಕೆ ಕೇಂದ್ರದ ಸುತ್ತಲೂ ಗೆಲುವಿನ ಸಂಭ್ರಮಾಚರಣೆಗಳಿಗೆ ಯಾವುದೇ ರೀತಿಯ ಅವಕಾಶವಿರುವುದಿಲ್ಲ ಹಾಗೂ ಕೇಂದ್ರದ ಹೊರಗಡೆ ಜನ ಗುಂಪುಗೂಡುವುದನ್ನೂ ಸಹ ನಿಷೇಧಿಸಲಾಗಿದೆ ಎಂದು ಆಯೋಗ ತಿಳಿಸಿದೆ.
ಗೆಲುವು ಸಾಧಿಸಿದ ಅಭ್ಯರ್ಥಿಯೊಂದಿಗೆ ಕೇವಲ ಇಬ್ಬರಿಗೆ ಮಾತ್ರ ಅವಕಾಶವಿರುತ್ತದೆ ಎಂದು ಆಯೋಗ ತಿಳಿಸಿದೆ.
ನಿಯಮ ಉಲ್ಲಘಿಸುವವರ ವಿರುದ್ಧ ಕಠಿಣ ಕ್ರಮ :
ಕೋವಿಡ್-19 ನಿಯಮಾವಳಿಗಳನ್ನು ಪಾಲಿಸದೇ ಇದ್ದಲ್ಲಿ, ಅಂತಹ ವ್ಯಕ್ತಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಅನ್ವಯ ಸೆಕ್ಷನ್ 51 ರಿಂದ 60 ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188 ರ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ಎಚ್ಚರಿಕೆ ನೀಡಿದ್ದಾರೆ.