ಚಿಕ್ಕಬಳ್ಳಾಪುರ: ಜಿಲ್ಲೆಯ ರೈತರು ಎರಡು ಸಾವಿರ ಅಡಿಗಳ ಪಾತಾಳದಿಂದ ನೀರು ತೆಗೆದು, ತರಕಾರಿ ಹಾಗೂ ಹಣ್ಣು ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಹಗಲು ರಾತ್ರಿ ಕಷ್ಟ ಪಟ್ಟು ಬೆಳೆದ ಬೆಳೆಗಳನ್ನು ಇನ್ನೇನು ಕಟಾವು ಮಾಡಿ ಅದರಿಂದ ಆದಾಯ ಗಳಿಸಬಹುದು ಎಂದು ಆಸೆ ಇಟ್ಟುಕೊಂಡಿದ್ದರು. ಆದರೆ ಅಷ್ಟರಲ್ಲಿ ಶುಕ್ರವಾರ ಸಂಜೆ ಸುರಿದ ಆಲಿಕಲ್ಲು ಮಳೆಗೆ ಎಲ್ಲವೂ ಮಣ್ಣು ಪಾಲಾಗಿವೆ. ಮತ್ತೊಂದೆಡೆ ಲಕ್ಷಾಂತರ ರೂಪಾಯಿ ಸಾಲ ಮಾಡಿ ಕಟ್ಟಿದ್ದ ಪಾಲಿ ಹೌಸ್ಗಳು ಅಸ್ತವ್ಯಸ್ತವಾಗಿವೆ. ಕೊರೊನಾ ಮಧ್ಯೆ ರೈತರಿಗೆ ಆಲಿಕಲ್ಲು ಮಳೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.
ಚಿಕ್ಕಬಳ್ಳಾಪುರದಲ್ಲಿ ಈ ಬಾರಿ ಹೆಚ್ಚಿನ ರೈತರು ದ್ರಾಕ್ಷಿ ಬೆಳೆ ಬೆಳೆದಿದ್ದರು. ಅದರಂತೆ ಉತ್ತಮ ಫಸಲು ಕೂಡ ಬಂದಿತ್ತು. ಆದರೆ ಕೊರೊನಾ ಸೋಂಕು ದ್ರಾಕ್ಷಿಗೆ ಬೇಡಿಕೆಯನ್ನು ಕಡಿಮೆ ಮಾಡಿತ್ತು, ಇದರಿಂದ ಕಂಗಲಾಗಿದ್ದ ದ್ರಾಕ್ಷಿ ಬೆಳೆಗಾರರು. ಇಂದು ಕಟಾವು ಮಾಡೋಣ ನಾಳೆ ಕಟಾವು ಮಾಡೋಣ ಒಳ್ಳೆ ಸಮಯ ಬರುತ್ತೆ ಎಂದು ತೋಟದಲ್ಲಿ ದ್ರಾಕ್ಷಿ ಬಿಟ್ಟಿದ್ದರು. ಆದರೆ ಸಂಜೆ ಸುರಿದ ಅಕಾಲಿಕ ಆಲಿಕಲ್ಲು ಮಳೆಗೆ ಐವತ್ತು ಎಕರೆಗೂ ಹೆಚ್ಚು ದ್ರಾಕ್ಷಿ ತೋಟಗಳು ಹಾಳಾಗಿವೆ. ಇನ್ನೂ ಶಿಡ್ಲಘಟ್ಟ ತಾಲೂಕಿನ ರಘು ಎನ್ನುವ ರೈತ ಲಕ್ಷಾಂತರ ರೂಪಾಯಿ ಸಾಲ ಮಾಡಿ ಹಾಗಲಕಾಯಿ ಬೆಳೆದಿದ್ದರು, ರಾಶಿ ರಾಶಿ ಕ್ವಿಂಟಾಲ್ ತೂಕದ ಆಲಿಕಲ್ಲು ಪಾಲಿ ಹೌಸ್ ಹಾಗೂ ಬೆಳೆಯ ಮೇಲೆ ಬಿದ್ದು ಎಲ್ಲವು ಹಾಳಾಗಿದೆ.
ಚಿಕ್ಕಬಳ್ಳಾಫುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಬಶೆಟ್ಟಿಹಳ್ಳಿ ಹಾಗೂ ಸುತ್ತಮುತ್ತ 10 ಕೀಲೋ ಮೀಟರ್ ರೇಡಿಯಸ್ನಲ್ಲಿ ಮೋಡಗಳೆ ಆಲಿಕಲ್ಲುಗಳಾಗಿ ಭೂಮಿಗೆ ಬಿದ್ದ ಹಾಗೆ ನೋಡ ನೋಡುತ್ತಿದ್ದಂತೆ ಭೂಮಿಗೆ ಬಿದ್ದಿದೆ ಇದರಿಂದ 60 ಎಕರೆ ಟೊಮ್ಯಾಟೊ, 20 ಎಕರೆಯಷ್ಟು ವಿವಿಧ ತರಕಾರಿ ಬೆಳೆಗಳು ಸೇರಿ ನೂರಾರು ಎಕರೆ ಬೆಳೆಗಳು ಹಾಳಾಗಿವೆ. ಹೀಗಾಗಿ ಈ ರೈತರಿಗೆ ಸೂಕ್ತ ಪರಿಹಾರ ಕೊಡಿಸುವಲ್ಲಿ ಪ್ರಯತ್ನಿಸುತ್ತೇನೆ ಎಂದು ಚಿಕ್ಕಬಳ್ಳಾಫುರ ಜಿಲ್ಲಾ ಪಂಚಾಯತಿ ಅಧ್ಯಕ್ಷ ಚಿಕ್ಕನರಸಿಂಹಯ್ಯ ಭರವಸೆ ನೀಡಿದ್ದಾರೆ.
ಕುಂಬಾರನಿಗೆ ವರ್ಷ ದೊಣ್ಣೆಗೆ ನಿಮಿಷ ಎನ್ನುವ ಹಾಗೆ ಚಿಕ್ಕಬಳ್ಳಾಪುರ ರೈತರ ಪರಿಸ್ಥಿತಿಯಾಗಿದ್ದು, ವರ್ಷಾನುಗಟ್ಟಲೆ ಕಷ್ಟ ಪಟ್ಟು ಬೆಳೆದಿದ್ದ ದ್ರಾಕ್ಷಿ, ಟೊಮ್ಯಾಟೊ, ತರಕಾರಿ ಬೆಳೆಗಳು ಆಲಿಕಲ್ಲು ಹೊಡೆತಕ್ಕೆ ಕೆಲವೆ ನಿಮಿಷಗಳಲ್ಲಿ ನೆಲಕಚ್ಚಿದೆ. ರೈತರ ಕಷ್ಟ ಅರಿತು ರಾಜ್ಯ ಸರ್ಕಾರ ರೈತರ ನೆರವಿಗೆ ನಿಲ್ಲಬೇಕು