ಬೆಳಗಾವಿ : ಕೋವಿಡ್ ಹಗಲಲ್ಲಿ ಹರಡುವುದಿಲ್ಲ, ರಾತ್ರಿ ಮಾತ್ರ ಹರಡುತ್ತದೆ ಎಂದು ಯಾವ ವಿಜ್ಞಾನಿ ಹೇಳಿದರೂ ತಿಳಿಸಿದರೆ ಅವರ ಫೋಟೊವನ್ನು ನಾವೂ ಇಟ್ಟುಕೊಳ್ಳುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬೆಳಗಾವಿಯಲ್ಲಿ ಶನಿವಾರ ವ್ಯಂಗ್ಯವಾಡಿದ್ದಾರೆ.
ರಾತ್ರಿ ಕರ್ಫ್ಯೂ ಮಾಡಿ ಆರ್ಥಿಕತೆ ಹಾಳು ಮಾಡುತ್ತಿದ್ದಾರೆ. ರಾತ್ರಿ ಕರ್ಫ್ಯೂ ಇಂದ ಜನರನ್ನು ಮಾನಸಿಕವಾಗಿ ಕುಂದಿಸುತ್ತಿದ್ದಾರೆ. ಹಗಲಲ್ಲಿ ಕೋವಿಡ್ ಹರಡುವುದಿಲ್ಲವೇ? ಇವೆಲ್ಲ ಅವೈಜ್ಞಾನಿಕ ನಿರ್ಧಾರಗಳು ಎಂದು ಬಿಜೆಪಿ ವಿರುದ್ಧ ಡಿಕೆಶಿ ಕಿಡಿ ಕಾರಿದ್ದಾರೆ.
ಪತ್ರಕರ್ತರ ಜೊತೆ ಮಾತನಾಡಿದ ಅವರು, ಲಕ್ಷ್ಮಣ ಸವದಿ ಸಾರಿಗೆ ಮಂತ್ರಿ ಆದಾಗಿನಿಂದ ಕೈಗೊಂಡ ನಿರ್ಧಾರಗಳೆಲ್ಲವೂ ತಪ್ಪಾಗಿವೆ. ನೌಕರರು ಸರ್ಕಾರದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಮೊದಲು ಆ ನೌಕರರಿಗೆ ಸಂಬಳ ಕೊಡುವುದಕ್ಕೆ ಹೇಳಿ ಎಂದು ತಿರುಗೇಟು ನೀಡಿದರು.
ಇದೇ ವೇಳೆ ಮಾತನಾಡಿದ ಡಿಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ ದೊಡ್ಡ ನಾಯಕ. ಅವರು ಮೌಢ್ಯಗಳ ವಿರುದ್ಧ ಹೋರಾಡುತ್ತಿದ್ದಾರೆ. ಒಬ್ಬೊಬ್ಬರಿಗೆ ಒಂದೊಂದು ನಂಬಿಕೆ ಇರುತ್ತದೆ ಎಂದರು. ಬೆಳಗಾವಿಯಲ್ಲಿ ಸತೀಶ್ ಗೆದ್ದೇ ಗೆಲ್ಲುತ್ತಾರೆ ಎಂದರು.