ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವರಾದ ಮೊಟಮ್ಮ, ಜಯಮಾಲ ಮತ್ತು ಉಮಾಶ್ರೀ, ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಸಂಬಂಧ ಸಿಎಂ ವಿರುದ್ಧ ಕಿಡಿಕಾರಿದ್ದಾರೆ.
27 ದಿನದ ಹಿಂದೆ ಸಿಡಿ ಕೇಸ್ ಬೆಳಕಿಗೆ ಬಂತು. ಅಂದಿನಿಂದಲೂ ಸುದ್ದಿ ಆಗುತ್ತಿದೆ. ಆದ್ರೆ ಆ ಹೆಣ್ಣು ಮಗಳನ್ನು ರಕ್ಷಣೆ ಮಾಡಬೇಕಾದ ಸರ್ಕಾರ ಒಂದೇಒಂದು ಹೇಳಿಕೆಯನ್ನೂ ಕೊಡ್ತಿಲ್ಲ. ಸಿಎಂ ಯಡಿಯೂರಪ್ಪ ಮೌನ ವಹಿಸಿದ್ದಾರೆ. ಮಾತ್ತೆತ್ತಿದ್ರೆ ರಾಮರಾಜ್ಯ ಎಂದು ಹೇಳ್ತಾರೆ. ಆದ್ರೆ ಹೆಣ್ಣು ಮಕ್ಕಳಿಗೆ ರಕ್ಷಣೆಯೇ ಇಲ್ಲ. ರಮೇಶ್ ಜಾರಕಿಹೊಳಿ ಆಯಂಡ್ ಟೀಂನಿಂದ ಯಡಿಯೂರಪ್ಪ ಸಿಎಂ ಆದ್ರು. ಅವರಿಗೆ ಕೊಟ್ಟ ಭರವಸೆಯನ್ನ ಮಾತ್ರ ಸಿಎಂ ಈಡೇರಿಸಲಿಲ್ಲ. ಪದೇಪದೆ ಕೇಂದ್ರ ನಾಯಕರನ್ನ ಭೇಟಿ ಮಾಡಿದ್ರು. ಜಾರಕಿಹೊಳಿ ಮತ್ತು ಟೀಂ ಹತ್ತಿಕ್ಕುವ ಕೆಲಸ ಬಿಜೆಪಿ ಮಾಡಿದೆ. ಹೀಗಾಗಿ ಬಿಜೆಪಿಯವರೇ ಸಿಡಿ ಹೊರ ತಂದಿದ್ದಾರೆ ಎಂದು ಮೋಟಮ್ಮ ಗಂಭೀರ ಆರೋಪ ಮಾಡಿದರು

ನಮಗೆ ಸಿಡಿ ಪ್ರಕರಣ ಭಾರಿ ಬೇಸರ ತರಿಸಿದೆ. ನಮ್ಮ ಅಧ್ಯಕ್ಷರ ಕೈವಾಡ ಇದರಲ್ಲಿಲ್ಲ. ನಮ್ಮ ಅಧ್ಯಕ್ಷರು ಈ ಕೆಲಸ ಮಾಡಬೇಕು ಅಂತ ನಿರ್ಧಾರ ಮಾಡಿದ್ರೆ ಆರೇ ತಿಂಗಳಲ್ಲಿ ಮಾಡ್ತಿದ್ರು. ಇದಕ್ಕೆ ಒಂದೂವರೆ ವರ್ಷ ಬೇಕಿರಲಿಲ್ಲ ಎಂದು ಡಿಕೆಶಿ ಮೇಲಿನ ಆರೋಪವನ್ನು ಅಲ್ಲಗೆಳೆದ ಮೋಟಮ್ಮ, ಕಾಂಗ್ರೆಸ್ ಸರ್ಕಾರ ಇದ್ದಾಗ ರಚನೆ ಆಗಿದ್ದ ಮಹಿಳೆಯರ ದೌರ್ಜನ್ಯ ಸಮಿತಿ ಮತ್ತೆ ರಚನೆ ಮಾಡಬೇಕು ಎಂದು ಆಗ್ರಹಿಸಿದರು.
ಜಯಮಾಲ ಮಾತನಾಡಿ, ಎರಡೆರಡು ದ್ವಂದ್ವ ಹೇಳಿಕೆ ಬರುತ್ತಿದೆ. ನನಗೆ ಜೀವ ಭಯ ಇದೆ ಎಂದು ಯುವತಿ ಹೇಳ್ತಿದ್ದಾಳೆ. ನಮ್ಮ ಅಧ್ಯಕ್ಷರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರು ಈ ಕೆಲಸ ಮಾಡಲು ಸಾಧ್ಯವಿಲ್ಲ. ಸರಿಯಾಗಿ ಮಾಹಿತಿ ಇಲ್ಲದೇ ಮಾತನಾಡುವುದು ಸರಿಯಲ್ಲ. ಸಿಎಂ ಯಡಿಯೂರಪ್ಪ ಮೌನ ಮುರಿಯಲಿ. ಜನರಿಗೆ ಗೊಂದಲ ಸೃಷ್ಟಿ ಮಾಡಬೇಡಿ. ಮೊದಲು ಆಕೆಯನ್ನ ಸಾರ್ವಜನಿಕವಾಗಿ ತನ್ನಿ. ಆಕೆ ನಮ್ಮ ಕಣ್ಣೆದುರು ಸಾವಿನ ಮಾತುಗಳನ್ನ ಕೊಡ್ತಿದ್ದಾಳೆ. ನಿರ್ಭಯ ಕೇಸ್ ಮೇಲೆ ಕ್ರಮ ಆಗಲಿಲ್ಲ. ಆರೋಪಿಗಳನ್ನ ಹಿಡಿಯುವಲ್ಲಿ ಸರ್ಕಾರ ವಿಫಲವಾಗಿದೆ. ಅಷ್ಟೊಂದು ಪ್ರಭಾವಿಗಳು ಇದಾರಾ? ತಪ್ಪು ಮಾಡಿದವರನ್ನ ಕೂಡಲೇ ಬಂಧಿಸಿ. ಸುಮ್ಮನೆ ಸುಳ್ಳು ಆರೋಪ ಮಾಡುವುದನ್ನ ಬಿಡಿ. ಮೊದಲು ಆಕೆಯನ್ನ ರಕ್ಷಣೆ ಮಾಡಿ ಎಂದು ಒತ್ತಾಯಿಸಿದರು.
ಉಮಾಶ್ರೀ ಮಾತನಾಡಿ, ಸಂತ್ರಸ್ತ ಹುಡುಗಿ ನನ್ನ ದುರುಪಯೋಗ ಪಡಿಸಿಕೊಂಡ್ರು ಅಂತ ಪದೇಪದೆ ಹೇಳ್ತಿದ್ದಾಳೆ. ಆದರೂ ಆಕೆ ಇರುವ ಜಾಗವನ್ನ ಸರ್ಕಾರ ಪತ್ತೆ ಹಚ್ಚುತ್ತಿಲ್ಲ. ತಾವು ಅಸಹಾಯಕರಾಗಿದ್ದೇವೆಂದು ಸರ್ಕಾರ ಒಪ್ಪಿಕೊಳ್ಳಬೇಕು. ತನಗೆ ಎಸ್ಐಟಿ ಮತ್ತು ಸರ್ಕಾರದ ಮೇಲೆ ನಂಬಿಕೆ ಇಲ್ಲ ಎಂದು ಯುವತಿ ಹೇಳುತ್ತಿದ್ದಾಳೆ. ಇದು ಸರ್ಕಾರಕ್ಕೆ ನಾಚಿಕೆಗೇಡು. ಈ ಪ್ರಕರಣದಲ್ಲಿ ಕೋರ್ಟ್ ಮಧ್ಯಪ್ರವೇಶಿಸಬೇಕು. ಅವಳ ಜೀವಕ್ಕೆ ಅಪಾಯವಾದ್ರೆ ಸರ್ಕಾರವೇ ಹೊಣೆ ಎಂದು ಎಚ್ಚರಿಸಿದರು.