ಬೆಂಗಳೂರು, ಫೆ.18- ನಟಸಾರ್ವಭೌಮ ಡಾ.ರಾಜ್ಕುಮಾರ್ ಅವರ ಪ್ರತಿಮೆ ವಿಷಯದಲ್ಲಿ ಅವಹೇಳನಕಾರಿಯಾಗಿ ಮಾತನಾಡಿ ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗಿದ್ದ ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್ ಕ್ಷಮೆ ಯಾಚಿಸಿದ್ದಾರೆ. ಡಾ.ರಾಜ್ಕುಮಾರ್ ಅವರ ಪ್ರತಿಮೆ ವಿಷಯದಲ್ಲಿ ಶಾಸಕ ಹ್ಯಾರಿಸ್ ಹಗುರವಾಗಿ ಮಾತನಾಡಿರುವ ವಿಡಿಯೋ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ವೈ ರಲ್ ಆಗಿತ್ತು. ನಂತರ ಹ್ಯಾರಿಸ್ ವಿರುದ್ಧ ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಅವರು ಕ್ಷಮೆ ಯಾಚಿಸಿದ್ದಾರೆ.
ಹ್ಯಾರಿಸ್ ಅವರು ಈ ರೀತಿ ಮಾತನಾಡಿದ್ದು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಕನ್ನಡಪರ ಸಂಘಟನೆಗಳು, ಡಾ.ರಾಜ್ ಅಭಿಮಾನಿಗಳು ಅವರ ಮೇಲೆ ಮುಗಿಬಿದ್ದಿದ್ದಾರೆ. ಮನೆ ಮುಂದೆಯೇ ಹೋಗಿ ಪ್ರತಿಭಟನೆ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಹರಿಹಾಯ್ದಿದ್ದಾರೆ.
ಇದರಿಂದ ಎಚ್ಚೆತ್ತ ಹ್ಯಾರಿಸ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಿ ನಾನು ರಾಜ್ಕುಮಾರ್ ಅಭಿಮಾನಿ. ಅವರನ್ನು ನೋಡಿ ಬೆಳೆದವನು. ಪ್ರತಿಮೆ ಇಟ್ಟು ಯಾರಾದರೂ ಕವರ್ ಮಾಡ್ತಾರಾ? ಪ್ರತಿಮೆ ಇಟ್ಟು ಮುಚ್ಚುವುದು ಸರಿಯಲ್ಲ ಎಂದಿದ್ದೆ. ನನ್ನ ಬಗ್ಗೆ ವಿಡಿಯೋ ಎಡಿಟ್ ಮಾಡಿ ಅಪಪ್ರಚಾರ ಮಾಡಿದ್ದಾರೆ. ಆದಾಗ್ಯೂ ನನ್ನ ಮಾತಿನಿಂದ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಪ್ರಕರಣಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.