ದಂತೇವಾಡ: ಛತ್ತೀಸಗಡ ರಾಜ್ಯದ ದಕ್ಷಿಣ ಬಸ್ತಾರ್ ವಲಯದಲ್ಲಿ ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ 24 ಮಂದಿ ಬಂಡುಕೋರರು ಗಣರಾಜ್ಯೋತ್ಸವದಂದು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಸ್ಥಳೀಯ ಪೊಲೀಸರಿಗೆ ಶರಣಾಗಿದ್ದಾರೆ.
ಜಿಲ್ಲಾ ಪೊಲೀಸರು ಕರೆ ನೀಡಿರುವ ಮನೆ ಮತ್ತು ಗ್ರಾಮ ವಾಪಸಾತಿಯ (ಲೊನ್ ವರತ್ತು ಪುನರ್ವಸತಿ) ಅಭಿಯಾನದಿಂದ ಪ್ರೇರಿತರಾಗಿ ಶರಣಾಗಿದ್ದಾರೆ ಎಂದು ದಂತೇವಾಡ ಎಸ್ಪಿ ಅಭಿಷೇಕ್ ಪಲ್ಲವ ತಿಳಿಸಿದ್ದಾರೆ.
ಶರಣಾದ ನಕ್ಸಲ್ ನಾಯಕರಲ್ಲಿ ಮಾವೋವಾದಿ ಚಿಕ್ಪಾಲ್-ಜಂಗಲೆಪಾರ ದಂಡಕಾರಣ್ಯ ಆದಿವಾಸಿ ಕಿಸಾನ್ ಮಜ್ದೂರ್ನ ಮುಖ್ಯಸ್ಥ ಆಯ್ತು ಮುಚಾಕಿ (31), ಚಿಕ್ಪಾಲ್ -ಸ್ಕೂಲಪಾರ ಡಿಎಕೆಎಂಎಸ್ ಮುಖ್ಯಸ್ಥ ಬಾಮನ್ ಡೆಂಗಾ ಸೋಧಿ (40) ಹಾಗೂ ಕಾಮ್ಲಿ ಮದ್ಕಾಮ್ (32) ಅವರು ಸೇರಿದ್ದರು. ಈ ಮೂವರ ಮೇಲೆ ಸರ್ಕಾರ ತಲಾ 1 ಲಕ್ಷ ರೂ. ಬಹುಮಾನ ಘೋಷಿಸಿತ್ತು. ಶರಣಾದವರಲ್ಲಿ 12 ಜನ ಮಹಿಳೆಯರು ಇದ್ದಾರೆ.
ಶರಣಾದ ಎಲ್ಲರಿಗೂ ತಕ್ಷಣದ ಪರಿಹಾರವಾಗಿ ತಲಾ ರೂ. 10 ಸಾವಿರ ಮತ್ತು ಇತರೆ ಸವಲತ್ತುಗಳನ್ನು ಪರಿಹಾರವಾಗಿ ಒದಗಿಸಲಾಗಿದೆ ಎಂದು ಎಸ್ಪಿ ಪಲ್ಲವ ತಿಳಿಸಿದ್ದಾರೆ.