ನವದೆಹಲಿ,ಜ.26- ದೆಹಲಿಯಲ್ಲಿ ರೈತರು ನಡೆಸಿದ ಟ್ರ್ಯಾಕ್ಟರ್ ಪರೇಡ್ನಲ್ಲಿ ಗುಂಡೇಟಿನಿಂದ ಒಬ್ಬ ರೈತ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಪೊಲೀಸರು ಮತ್ತು ರೈತರ ಸಂಘರ್ಷದಲ್ಲಿ ಕೆಲ ಪೊಲೀಸರಿಗೂ ಗಾಯಗಳಾಗಿದ್ದು, ಗಾಯಗೊಂಡ ಪೊಲೀಸರನ್ನು ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲಿಸಿದ್ದಾರೆ. ಐಟಿಒ ಮೆಟ್ರೋ ನಿಲ್ದಾಣದ ಸಮೀಪ ಡಿಡಿಯು ಮಾರ್ಗದಲ್ಲಿ ನಡೆದ ಸಂಘರ್ಷದಲ್ಲಿ ಪೊಲೀಸರು ಗೋಲಿಬಾರ್ ನಡೆಸಿದ್ದು, ಗುಂಡು ತಗುಲಿ ರೈತರೊಬ್ಬರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಆದರೆ, ಪೊಲೀಸ್ ಮೂಲಗಳ ಪ್ರಕಾರ ಟ್ರ್ಯಾಕ್ಟರ್ ಚಲಾವಣೆಯ ವೇಳೆ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ತಿಳಿಸಲಾಗಿದೆ. ಸದ್ಯಕ್ಕೆ ಸಾವಿಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಆದರೆ, ರಸ್ತೆ ಬದಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಪ್ರತಿಭಟನೆಯ ಉತ್ತುಂಗದ ಭಾಗವಾಗಿ ರೈತರು ಕೆಂಪುಕೋಟೆ ಪ್ರವೇಶಿಸಿದ್ದು, ಕೋಟೆಯ ಗೋಪುರದ ಮೇಲ್ಭಾಗಕ್ಕೆ ಹತ್ತಿ ಧ್ವಜಾರೋಹಣ ನೆರವೇರಿಸಿದ್ದಾರೆ. ಹಾರಿಸಲಾದ ಖಲಿಸ್ತಾನಕ್ಕೆ ಸೇರಿದ್ದು ಎಂಬ ಆರೋಪಗಳು ಕೇಳಿ ಬಂದಿವೆ. ಆದರೆ, ಇದು ಸ್ಪಷ್ಟಗೊಂಡಿಲ್ಲ.
ಪರಿಸ್ಥಿತಿ ನಿಭಾಯಿಸಲು ಪೊಲೀಸರು ನಾನಾ ಕ್ರಮಗಳನ್ನು ಕೈಗೊಂಡಿದ್ದಾರೆ. ನಿಗದಿತ ಮಾರ್ಗದಲ್ಲೇ ಟ್ರ್ಯಾಕ್ಟರ್ ರ್ಯಾಲಿ ನಡೆಯಬೇಕೆಂದು ಪದೇ ಪದೇ ಮನವಿ ಮಾಡುತ್ತಿದ್ದರು. ಆದರೆ, ಅದಕ್ಕೆ ಯಾರೂ ಕಿವಿಗೊಡಲಿಲ್ಲ. ಕೊನೆಗೆ ಮೆಟ್ರೋ ರೈಲ್ವೆ ಸಂಚಾರ ಸ್ಥಗಿತಗೊಳಿಸಲಾಯಿತು. ಮಧ್ಯಾಹ್ನದ ನಂತರ ಇಂಟರ್ನೆಟ್ ಹಾಗೂ ದೂರಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ. ಇದರಿಂದಾಗಿ ದೆಹಲಿಯ ಪ್ರತಿಭಟನೆಯಲ್ಲಿ ಏನಾಗುತ್ತಿದೆ ಎಂದು ಹೊರ ಭಾಗಕ್ಕೆ ಮಾಹಿತಿ ತಿಳಿಯದೆ ಸಾಕಷ್ಟು ಗೊಂದಲಗಳಾದವು.
ರೈತನ ಸಾವಿನ ಬಗ್ಗೆ ನಾನಾ ರೀತಿಯ ವದಂತಿಗಳು ದೆಹಲಿಯ ಹೊರಭಾಗದಲ್ಲಿ ಹರಿದಾಡಲಾರಂಭಿಸಿದವು. ದೆಹಲಿಯಲ್ಲಿ ರೈತರ ಪ್ರತಿಭಟನೆ 62ನೇ ದಿನಕ್ಕೆ ಕಾಲಿಟ್ಟ ದಿನವಾದ ಇಂದು ಗಣರಾಜ್ಯೋತ್ಸವದ ಅಂಗವಾಗಿ ರೈತರು ಪಂಜಾಬ್, ಹರಿಯಾಣ ಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಟ್ರ್ಯಾಕ್ಟರ್ ರ್ಯಾಲಿ ನಡೆಸಿದರು. ಇಷ್ಟೆಲ್ಲಾ ಅನಾಹುತಗಳ ಹರತಾಗಿಯೂ ಕೇಂದ್ರ ಸರ್ಕಾರ ವಿವಾದಿತ ಮಸೂದೆಗಳ ಬಗ್ಗೆ ಯಾವುದೇ ಭರವಸೆ ನೀಡಿಲ್ಲ.