ನವದೆಹಲಿ: ಇಂದು ಭಾರತದ 72ನೇ ಗಣರಾಜ್ಯೋತ್ಸವ. ಈ ಬಾರಿ ಕೊರೊನಾ ಸಾಂಕ್ರಾಮಿಕದ ಹಿನ್ನೆಲೆ ಗಣರಾಜ್ಯೋತ್ಸವ ಸಮಾರಂಭವನ್ನ ಸಂಕ್ಷಿಪ್ತವಾಗಿ ನಡೆಸಲಾಗ್ತಿದೆ. ದೆಹಲಿಯ ಕೆಂಪುಕೋಟೆಯಲ್ಲಿ ಬೆಳಿಗ್ಗೆ 9 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು ಬೆಳಗ್ಗೆ 11.25 ಕ್ಕೆ ಮುಕ್ತಾಯಗೊಳ್ಳಲಿದೆ.
ರಾಜ್ಪಥ್ನಲ್ಲಿ ನಡೆಯಲಿರುವ ಪಥಸಂಚಲನದ ಮಾರ್ಗವನ್ನ ಕಡಿತಗೊಳಿಸಲಾಗಿದೆ. ಹಾಗೇ ಈ ಬಾರಿಯ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಇಲ್ಲ. ಕಡಿಮೆ ಸಂಖ್ಯೆಯ ಪ್ರೇಕ್ಷಕರು ಮಾತ್ರ ಪರೇಡ್ ವೀಕ್ಷಿಸಲಿದ್ದಾರೆ. 15 ವರ್ಷದೊಳಗಿನ ಮಕ್ಕಳಿಗೆ ಕಾರ್ಯಕ್ರಮಕ್ಕೆ ಬರಲು ಅವಕಾಶ ನೀಡಿಲ್ಲ. ಸಶಸ್ತ್ರ ಪಡೆ ಮತ್ತು ನೌಕಾಪಡೆಯ ತುಕಡಿಗಳಲ್ಲಿ ಕಡಿಮೆ ಸೈನಿಕರು ಪಥಸಂಚಲನದಲ್ಲಿ ಪಾಲ್ಗೊಳ್ಳಲಿದ್ದಾರೆ.
ಹೊಸದಾಗಿ ಸೇನೆಗೆ ಸೇರ್ಪಡೆಗೊಂಡಿರೋ ರಫೇಲ್ ಫೈಟರ್ ಜೆಟ್ ಮತ್ತು 1971ರ ಭಾರತ-ಪಾಕಿಸ್ತಾನ ಯುದ್ಧದ 50ನೇ ವಾರ್ಷಿಕೋತ್ಸವ ಪರೇಡ್ ಮುನ್ನಡೆಸಲಿರುವ ಬಾಂಗ್ಲಾದೇಶಿ ಟ್ರೈ ಸರ್ವೀಸ್ ಕಾಂಟಿಂಜೆಂಟ್ ಇಂದಿನ ಪರೇಡ್ನ ಪ್ರಮುಖ ಆಕರ್ಷಣೆಯಾಗಿವೆ. ರಾಜ್ಯ ಹಾಗೂ ಕೇಂದ್ರಾಳಿತ ಪ್ರದೇಶಗಳಿಂದ 17 ಟ್ಯಾಬ್ಲೋಗಳು, ರಕ್ಷಣಾ ಸಚಿವಾಲಯ ಹಾಗೂ ಇತರೆ 9 ಸಚಿವಾಲಯಗಳ ಟ್ಯಾಬ್ಲೋಗಳು ಸೇರಿ ಒಟ್ಟು 32 ಸ್ತಬ್ಧಚಿತ್ರಗಳು ಪರೇಡ್ನಲ್ಲಿ ಸಾಗಲಿವೆ.