ನವದೆಹಲಿ, ಜ.26- ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಇಲ್ಲದೇ ಆಚರಿಸಲ್ಪಟ್ಟಿರುವ ಪ್ರಥಮ ಗಣರಾಜ್ಯೋತ್ಸವ ಇದಾಗಿದೆ. ವಿಶ್ವದ್ಯಾಂತ ಕೊರೊನಾ ಸಾಂಕ್ರಾಮಿಕ ವ್ಯಾಪಿಸಿರುವ ಕಾರಣ ಅತಿಥಿಯ ಅನುಪಸ್ಥಿತಿಯಲ್ಲಿ 72ನೇ ಗಣರಾಜ್ಯೋತ್ಸವ ಆಚರಿಸಲಾಯಿತು. 50 ವರ್ಷಗಳಲ್ಲಿ ಮೊಟ್ಟಮೊದಲ ಬಾರಿಗೆ ಇಂತಹ ಅನಿವಾರ್ಯತೆ ಕಂಡುಬಂತು.
ಯುಕೆ ಪ್ರಧಾನ ಮಂತ್ರಿ ಬೋರಿಸ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಬೇಕಾಗಿತ್ತು. ಆದರೆ, ಕೋವಿಡ್-19 ಸಾಂಕ್ರಾಮಿಕ ಮಹಾಮಾರಿ ಕಾರಣದಿಂದ ಅವರ ಅನುಪಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತ್ರಿವರ್ಣ ಧ್ವಜ ಹಾರಿಸುವ ಮೂಲಕ 72ನೇ ಗಣರಾಜ್ಯೋತ್ಸವಕ್ಕೆ ಚಾಲನೆ ನೀಡಿದರು.
ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಪಡೆ ಮುಖ್ಯಸ್ಥರು ಮತ್ತು ನಮ್ಮ ದೇಶದ ಗಣ್ಯಾತಿಗಣ್ಯರು ಇದಕ್ಕೆ ಸಾಕ್ಷಿಯಾದರು. ಕಟ್ಟುನಿಟ್ಟಿನ ಕೊರೊನಾ ಮುನ್ನೆಚ್ಚರಿಕೆಗಳ ಕ್ರಮಗಳನ್ನು ಅನುಸರಿಸಿ ಗಣರಾಜ್ಯೋತ್ಸವ ಆಚರಿಸಲಾಯಿತು.