ಹನೂರು, ಮಾ.16- ದೇಶದಲ್ಲಿ ಕೊರೊನಾ ಎಫೆಕ್ಟ್ ನಿಂದಾಗಿ ತಾಲ್ಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೂ ಕರಿಛಾಯೆ ಬೀರಿದೆ. ಇದೇ ತಿಂಗಳು 21 ರಿಂದ 25ರ ವರೆಗೆ ಅದ್ಧೂರಿಯಾಗಿ ನಡೆಯಬೇಕಾಗಿದ್ದ ಯುಗಾದಿ ಹಬ್ಬದ ಜಾತಾ ಮಹೋತ್ಸವವನ್ನು ಸಂಪ್ರದಾಯದಂತೆ ಸ್ಥಳೀಯರಿಗೆ ಮಾತ್ರ ಸೀಮಿತಗೊಳಿಸಿದೆ.
ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಿಂದ ಬರುತ್ತಿದ್ದ ಮಾದಪ್ಪನ ಭಕ್ತರು ಮ.ಬೆಟ್ಟಕ್ಕೆ ಬಾರದಂತೆ ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ನಿರ್ಬಂಧ ಹೇರಲಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ. ರಾಜ್ಯದ ಅತಿ ಹೆಚ್ಚು ಆದಾಯ ತರುವ ಮುಜಾರಾಯಿ ಇಲಾಖೆ ದೇವಾಲಯಗಳಲ್ಲಿಎರಡನೆ ಸ್ಥಾನದಲ್ಲಿರುವ ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರೆಯೂ ಸಹ ಮುಖ್ಯ ಪಾತ್ರ ವಹಿಸುತ್ತಿತ್ತು ಮತ್ತು ಆ ತಿಂಗಳ ಆದಾಯವು ಸಹ ಕೋಟಿ ಮೀರುತ್ತಿತ್ತು.
ಮಹದೇಶ್ವರ ಬೆಟ್ಟದಲ್ಲಿ ಪದ್ಧತಿಯಂತೆ ಸರಳವಾಗಿ ಚಿನ್ನದ ತೇರು, ಹುಲಿ ವಾಹನ, ಬೆಳ್ಳಿ ಬಸವ, ರುದ್ರಾಕ್ಷಿ ಮಂಟಪ ಹಾಗೂ ಯುಗಾದಿ ಜಾತ್ರಾ ವಿಶೇಷವಾಗಿ ಮಹಾ ರಥೋತ್ಸವ ಸ್ಥಳೀಯ ಭಕ್ತರ ಸಮ್ಮುಖದಲ್ಲಿ ಜರುತ್ತದೆ. ಯುಗಾದಿ ಜಾತ್ರೆಗೆ ತಮಿಳುನಾಡಿನಿಂದ ಹೆಚ್ಚಾಗಿ ಭಕ್ತರು ಆಗಮಿಸುತ್ತಿದ್ದರು. ಹಾಗೆಯೇ ರಾಜ್ಯದ ಎಲ್ಲ ಕಡೆಗಳಿಂದಲೂ ಭಕ್ತರ ಬಂದು ಹರಕೆ ರೂಪದಲ್ಲಿ ಲಕ್ಷಾಂತರ ರೂ.ವರಮಾನ ಪ್ರಾಧಿಕಾರಕ್ಕೆ ಬರುತ್ತಿತ್ತು.
ಆದರೆ, ಕೊರೊನಾ ವೈರಸ್ನಿಂದ ಉಂಟಾಗಿರುವ ಅಂಟು ರೋಗ ತಡೆಗಟ್ಟುವ ಉದ್ದೇಶ ಮತ್ತು ಸರ್ಕಾರದ ಸುತ್ತೋಲೆ ಜಿಲ್ಲಾಡಳಿತ ಆದೇಶದ ಮೇರೆಗೆ ಕಟ್ಟುನಿಟ್ಟಾಗಿ ಕ್ರಮ ವಹಿಸಲಾಗಿದೆ. ಮಹದೇಶ್ವರ ಬೆಟ್ಟದ ವಸತಿ ಗೃಹ, ಕೊಠಡಿ ಇನ್ನಿತರ ಯಾವುದೇ ಸೌಲಭ್ಯಗಳು ನೀಡಲು ಪ್ರಾಧಿಕಾರ ನಿರ್ಧರಿಸಿದೆ. ಹಾಗೆಯೇ ರಂಗ ಮಂದಿರದಲ್ಲಿ ಭಕ್ತರು ಸಾವಿರಾರು ಟೆಂಟ್ ಹಾಕಿಕೊಳ್ಳುತ್ತಿದ್ದು ಅದಕ್ಕೂ ಸಹ ಅವಕಾಶಗಳು ಇರುವುದಿಲ್ಲ. ಈ ಬಾರಿ ಸ್ಥಳೀಯವಾಗಿ ಯುಗಾದಿ ಜಾತ್ರೆ ನೆರವೇರಲಿದೆ. ಹಾಗಾಗಿ ಸಾರ್ವಜನಿಕರು ಮತ್ತು ಭಕ್ತರು ಸಹಕರಿಸಬೇಕಾಗಿ ಮನವಿ ಮಾಡಲಾಗಿದೆ.