ಯಾದಗಿರಿ: ಜೀವದ ಹಂಗು ತೊರೆದು ಕೋವಿಡ್ 19 ವಿರುದ್ಧ ಹೋರಾಟ ನಡೆಸುತ್ತಿರುವ ಕೊರೋನಾ ವಾರಿಯರ್ ಸ್ಟಾಫ್ ನರ್ಸ್ ಕೊರೋನಾ ವೈರಸ್ಗೆ ಬಲಿಯಾಗಿದ್ದಾರೆ. ಯಾದಗಿರಿ ತಾಲೂಕಿನ ಕೌಳುರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 12 ವರ್ಷದಿಂದ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಗೀತಾ ಎಂಬುವವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಕೋವಿಡ್ 19 ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ ತಿಂಗಳ 19 ರಂದು ಕೋವಿಡ್ ಟೆಸ್ಟ್ ಮಾಡಿಸಿದಾಗ ಕೊರೋನಾ ದೃಢವಾಗಿತ್ತು. ನಂತರ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾಗಿದ್ದರು. ನಂತರ ಕೋವಿಡ್ ಲಕ್ಷಣಗಳು ಕಂಡುಬಂದ ಹಿನ್ನೆಲೆ ಇದೆ 29 ರಂದು ಟೆಸ್ಟ್ ಮಾಡಿಸಿದಾಗ ಮತ್ತೆ ಎರಡನೇ ಬಾರಿ ಕೊರೋನಾ ದೃಢವಾಗಿತ್ತು.ಯಾದಗಿರಿ ನಗರದ ಹೊರಭಾಗದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಗೀತಾ ಅವರು ಮೃತಪಟ್ಟಿದ್ದಾರೆ.
ಯಾದಗಿರಿ ನಗರದ ನಜರಾತ್ ಕಾಲೊನಿಯಲ್ಲಿ ವಾಸವಾಗಿದ್ದಇವರು ಕಳೆದ 12 ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೊರೋನಾ ಸಂದರ್ಭದಲ್ಲಿ ಹಗಲಿರುಳು ಕೋವಿಡ್ ಜಾಗೃತಿ ಮೂಡಿಸುವ ಹಾಗೂ ಕೋವಿಡ್ ತಡೆಗೆ ಕರ್ತವ್ಯ ಪ್ರಜ್ಞೆ ಮೆರೆದಿದ್ದರು. ಕೌಳುರು ಆಸ್ಪತ್ರೆಯಲ್ಲಿ ವೈದ್ಯರ ಹಾಗೂ ಸಿಬ್ಬಂದಿಗಳ ಕೊರತೆ ನಡುವೆ ಹಗಲಿರುಳು ಕೆಲಸ ಮಾಡಿದ್ದರು. ಸಿಬ್ಬಂದಿಗಳ ಕಣ್ಣೀರು :
ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ರೋಗಿಗಳ ಜೀವ ಉಳಿಸುವ ಕಾರ್ಯ ವೈದ್ಯರು, ಸಿಬ್ಬಂದಿಗಳು ಜೀವದ ಹಂಗು ತೊರೆದು ಮಾಡುತ್ತಿದ್ದಾರೆ. ಆದರೆ, ಜೀವ ಉಳಿಸುವ ಕೆಲಸ ಮಾಡುವ ಕೊರೋನಾ ವಾರಿಯರ್ ಮೃತಪಟ್ಟಿದ್ದು, ಈಗ ಬರಸಿಡಿಲು ಬಡಿದಂತಾಗಿದೆ.
ನರ್ಸ್ ಗೀತಾ ನಿಧನದಿಂದ ಆರೋಗ್ಯ ಇಲಾಖೆ ಸಿಬ್ಬಂದಿಗಳು ಕೂಡ ಕಣ್ಣೀರು ಹಾಕಿದ್ದು ಕರುಳು ಚುರ್ ಎನ್ನುವಂತಾಗಿದೆ. ಕೊರೋನಾ ವಾರಿಯರ್ ಮೃತಪಟ್ಟಿದ್ದು ಜಿಲ್ಲೆಯಲ್ಲಿಯೇ ಮೊದಲನೇ ಪ್ರಕರಣ ಇದಾಗಿದೆ.
ನಾವೇ ಎಲ್ಲರ ಕಣ್ಣೀರು ಒರೆಸುತ್ತೆವೆ ಈಗ ಕಣ್ಣೀರು ಒರೆಸುವ ಕೊರೋನಾ ವಾರಿಯರ್ ಕೋವಿಡ್ ನಿಂದ ಮೃತಪಟ್ಟಿದ್ದು ತುಂಬಲಾರದ ನಷ್ಟವಾಗಿದೆ.ಕೋವಿಡ್ ಸಂದರ್ಭದಲ್ಲಿ ಹಗಲಿರುಳು ಕೆಲಸ ಗೀತಾ ಅವರು ಮಾಡಿದ್ದಾರೆ.ಅವರ ಸಾವು ತುಂಬಾ ನೋವುಂಟು ಮಾಡಿದ್ದು ಆರೋಗ್ಯ ಇಲಾಖೆಗೆ ತುಂಬಲಾರದ ನಷ್ಟವಾಗಿದೆ ಎಂದು ಡಿಎಚ್ ಒ ಡಾ.ಇಂಧುಮತಿ ತಿಳಿಸಿದ್ದಾರೆ.ಸಚಿವ ಶ್ರೀರಾಮುಲು ಸಂತಾಪ…!
ಕೌಳುರು ಗ್ರಾಮದ ಸ್ಟಾಫ್ ನರ್ಸ್ ಗೀತಾ ಸಾವಿಗೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, ಕೋವಿಡ್ ರೋಗಿಗಳ ಸೇವೆಯಲ್ಲಿ ನಿರತರಾದ ಗೀತಾ ಅವರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಕರ್ತವ್ಯ ನಿಷ್ಠೆ ನಿಜಕ್ಕು ಶ್ಲಾಘನೀಯವಾಗಿದೆ. ಸರ್ಕಾರದಿಂದ ಅವರ ಕುಟುಂಬಕ್ಕೆ ಸಿಗಬೇಕಾದ ಪರಿಹಾರ ಹಾಗೂ ಸೌಲಭ್ಯ ಶೀಘ್ರವಾಗಿ ತಲುಪಿಸಲಾಗುವದು ಎಂದು ಟ್ವಿಟ್ ಮೂಲಕ ಮೃತ ಕುಟುಂಬಕ್ಕೆ ಧೈರ್ಯ ತುಂಬುವ ಕಾರ್ಯ ಮಾಡಿದ್ದಾರೆ.
ಯಾದಗಿರಿ ಜಿಲ್ಲೆಯ ಕೌಳೂರಿನಲ್ಲಿ ಸ್ಟಾಫ್ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಗೀತಾ ಅವರು ಇಂದು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಗೀತಾ ಅವರು ಕೋವಿಡ್ ರೋಗಿಗಳ ಸೇವೆಯಲ್ಲಿ ನಿರತರಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬಕ್ಕೆ ಈ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ