ಏನಿರತ್ತೆ..?, ಏನಿರಲ್ಲ..?
ಬೆಂಗಳೂರು: ಅನ್ನದಾತರ ಕಿಚ್ಚಿಗೆ ಸೋಮವಾರ ಕರುನಾಡು ಸಂಪೂರ್ಣ ಬಂದ್ ಆಗಲಿದೆ. ರೈತರ ಈ ಹೋರಾಟ ಸರ್ಕಾರದ ವಿರುದ್ಧದಾಗಿದೆ. ರೈತ ವಿರೋಧಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಸಲುವಾಗಿ ನಾಳೆ ರೈತರು ಕರ್ನಾಟಕ ಬಂದ್ ಮಾಡಲಿದ್ದಾರೆ.
ಬಂದ್ ಗೆ ಯಾರೆಲ್ಲಾ ಬೆಂಬಲ ಕೊಡ್ತಾರೆ?
ಐಕ್ಯ ಹೋರಾಟ ಸಮಿತಿ, ರೈತ ಹೋರಾಟ ಸಂಘಟನೆಗಳು, ಕನ್ನಡಪರ ಹೋರಾಟ ಸಂಘಟನೆಗಳು, ನಾರಾಯಣಗೌಡರ ಕರವೇ ಸಂಘಟನೆ, ಪ್ರವೀಣ್ ಶೆಟ್ಟಿ ಕರವೇ ಬಣ, 25ಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳು, 35 ರೈತ ಪರ ಸಂಘಟನೆಗಳು, ದಲಿತ ಸಂಘಟನೆಗಳು, ದಲಿತ ಸಂಘರ್ಷ ಸಮಿತಿ, ಉತ್ತರ ಕರ್ನಾಟಕ, ಮುಂಬೈ ಕರ್ನಾಟಕದ ವಿವಿಧ ಸಂಘಟನೆಗಳು, ಮಹಾದಯಿ ಹೋರಾಟ ಸಂಘಟನೆ, ಓಲಾ, ಊಬರ್, ಕ್ಯಾಬ್, ಆಟೋ,ಟ್ಯಾಕ್ಸಿ ಅಸೋಸಿಯೇಶನ್, ಆಟೋ ಮಿತ್ರ, ಪೀಸ್ ಆಟೋ ಸಂಘಟನೆ, ಖಾಸಗಿ ಟೂರಿಸ್ಟ್ ಮತ್ತು ಟ್ಯಾಕ್ಸಿ ಮಾಲೀಕರ ಸಂಘಗಳು ಹೋರಾಟಕ್ಕೆ ಬೆಂಬಲ ಕೊಡುತ್ತವೆ. ಇನ್ನು ಸಾರಿಗೆ ಕಾರ್ಮಿಕರ ಒಕ್ಕೂಟ ಹಾಗೂ ರಾಜ್ಯ ಬೀದಿ ಬದಿ ವ್ಯಾಪಾರ ಸಂಘ ರಾಜ್ಯ ಲಾರಿ ಮಾಲೀಕರ ಅಸೋಸಿಯೇಶನ್ನಿಂದ ನೈತಿಕ ಬೆಂಬಲ ಸಿಗಲಿದೆ.
ಏನಿರುತ್ತೆ?:
ಕರ್ನಾಟಕ ಬಂದ್ ವೇಳೆ ಹಾಲು, ಹಣ್ಣು, ತರಕಾರಿ, ಮೆಡಿಕಲ್ ಸ್ಟೋರ್ಸ್, ಆಸ್ಪತ್ರೆ ಸೇವೆಗಳು ಇರಲಿವೆ. ಹೋಟೆಲ್ ಗಳು ಎಂದಿನಂತೆ ಓಪನ್ ಇರಲಿದ್ದು, ಕೆಎಸ್ಆರ್ ಟಿಸಿ, ಬಿಎಂಟಿಸಿ, ಮೆಟ್ರೋ, ರೈಲು, ವಿಮಾನ ಸಂಚಾರ ಇರಲಿದೆ.
ಏನಿರಲ್ಲ?:
ಓಲಾ-ಉಬರ್, ಆಟೋ-ಟ್ಯಾಕ್ಸಿ ಸಂಘಗಳು ಬಂದ್ ಗೆ ಬೆಂಬಲ ನೀಡಿದ್ದು, ಈ ಸೇವೆಗಳು ಇರುವುದಿಲ್ಲ. ಖಾಸಗಿ ಬಸ್, ಲಾರಿ ಸೇವೆಗಳು ಬಂದ್ ಇರಲಿವೆ ಎನ್ನಲಾಗಿದೆ. ಅಂಗಡಿ ಮುಂಗಟ್ಟು ಕ್ಲೋಸ್, ಮಾಲ್ ಗಳು ಓಪನ್ ಆಗಲ್ಲ, ಪ್ರತಿಭಟನೆಯ ತೀವ್ರತೆ ನೋಡಿಕೊಂಡು ಕೈಗಾರಿಕೆಗಳು, ಕಂಪನಿಗಳು ಮುಚ್ಚುವ ಬಗ್ಗೆ ನಿರ್ಧಾರ.
ಕರವೇ ಅಧ್ಯಕ್ಷ ನಾರಾಯಣ ಗೌಡ, ಸೋಮವಾರದ ಬಂದ್ ಗೆ ಕರವೇ ಸಂಪೂರ್ಣ ಬೆಂಬಲಕ್ಕೆ ನಿಲ್ಲುತ್ತೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕರವೇ ಬಣ ಬಂದ್ ನಲ್ಲಿ ಪಾಲ್ಗೊಳ್ಳುತ್ತೆ. ಸೋಮವಾರದ ಬಂದ್ನಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಬೇಕು. ಹಾಗಾಗಿ ಬಂದ್ ಯಾವ ಸ್ವರೂಪ ಬೇಕಾದರೂ ಪಡೆಯಬಹುದು ಎಂದು ಹೇಳಿದ್ದಾರೆ.
ರೈಲು, ವಿಮಾನ, ಹೆದ್ದಾರಿ, ಸಾರಿಗೆ ಓಡಾಟದಲ್ಲಿ ಏನು ಬೇಕಾದ್ರು ಆಗಬಹುದು. ಭೂಸುಧಾರಣಾ, ಎಪಿಎಂಪಿ ಕಾಯ್ದೆ ವಿರುದ್ಧ ಹೋರಾಟ ನಿಲ್ಲಲ್ಲ. ಈ ಎರಡು ಕಾಯ್ದೆಗಳು, ರೈತರಿಗೆ ಮರಣ ಶಾಸನ ಬರೆದಂತೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭಂಡ ಸರ್ಕಾರಗಳು. ರೈತರನ್ನು ಉದ್ದಾರ ಮಾಡ್ತೀವಿ ಅಂತಾರೆ. ಒಳ್ಳೆ ಬೆಲೆ ಸಿಗುತ್ತೆ ಅಂತಿದ್ದಾರೆ ಅದೆಲ್ಲಾ ಸುಳ್ಳು. ರೈತನ ಭೂಮಿಯನ್ನು ಹಣವಂತರು, ನೂರಾರು, ಸಾವಿರಾರು ಎಕರೆ ಜಮೀನು ತಗೋತಾರೆ. ರೈತರು ಅವರ ಅಧೀನರಾಗ್ತಾರೆ ಎಂದು ಸರ್ಕಾರಗಳ ವಿರುದ್ಧ ಕಿಡಿಕಾರಿದ್ರು.
ರೈತರ ಬಗ್ಗೆ ಕಾಳಜಿ ಇರುವ ಎಲ್ಲರೂ ಪ್ರತಿಭಟನೆಯಲ್ಲಿ ಪಾಲ್ಗೊಳ್ತಾರೆ. ಕೊರೊನಾದಿಂದ ಜನ ತುಂಬಾ ಕಷ್ಟಪಟ್ಟಿದ್ದಾರೆ. ಇಂತಹ ಸಮಯದಲ್ಲಿಯೂ ನಾವು ರೈತರ ಪರ ನಿಲ್ಲುತ್ತೇವೆ. ಸೋಮವಾರ ಸಾರ್ವಜನಿಕರಿಗೆ ತೊಂದರೆ ಆಗುತ್ತೆ, ಈ ಮೂಲಕ ಅವರ ಕ್ಷೇಮೆ ಕೇಳ್ತೀನಿ ಅಂದರು.