ಶಿವಮೊಗ್ಗ: ಅರಸಾಳು ಬಳಿ ರೈಲ್ವೇ ವಿದ್ಯುತ್ ಲೈನ್ ಹಾಗೂ ಹಳಿ ಮೇಲೆ ಮರವೊಂದು ಮುರಿದು ಬಿದ್ದಿದೆ. ಇದರಿಂದ ತಾಳಗುಪ್ಪದಿಂದ ಬೆಂಗಳೂರಿಗೆ ತೆರಳುತ್ತಿದ್ದ ರೈಲು ಮಾರ್ಗ ಮಧ್ಯೆ ನಿಂತಿದೆ. ಇದರಿಂದಾಗಿ ಹಬ್ಬವನ್ನು ಮುಗಿಸಿ ಬೆಂಗಳೂರಿಗೆ ತೆರಳುತ್ತಿದ್ದ ನೂರಾರು ಪ್ರಯಾಣಿಕರು ತೀವ್ರ ಪರದಾಡುವಂತಾಗಿದೆ.
ಬೆಳಿಗ್ಗೆ 5:20ಕ್ಕೆ ಸರಿಯಾಗಿ ತಾಳಗುಪ್ಪದಿಂದ ಹೊರಟಿದ್ದ ರೈಲು, ನಿಗದಿಯಂತೆ ಬೆಳಿಗ್ಗೆ 07 ಗಂಟೆಗೆ ಶಿವಮೊಗ್ಗ ಹಾಗೂ ಮಧ್ಯಾಹ್ನ 12 ಗಂಟೆಗೆ ಬೆಂಗಳೂರು ನಗರವನ್ನು ತಲುಪಬೇಕಾಗಿತ್ತು. ಆದರೆ, ಅರಸಾಳು ಬಳಿ ರೈಲ್ವೇ ವಿದ್ಯುತ್ ಲೈನ್ ಹಾಗೂ ಹಳಿ ಮೇಲೆ ಮರ ಬಿದ್ದಿದ್ದು, ವಿದ್ಯತ್ ಸಂಪರ್ಕ ಕಡಿತಗೊಂಡು ರೈಲು ಆನೆಕೆರೆ ಮತ್ತು ನೆವಟೂರು ಗ್ರಾಮಗಳ ಮಧ್ಯಭಾಗದಲ್ಲಿ ನಿಂತಿದೆ.
ರೈಲು ಮಧ್ಯದಲ್ಲಿ ನಿಂತಿದ್ದರಿಂದ ಹಬ್ಬಗಳ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದ ಜನರು, ರಜೆ ಮುಗಿಸಿ ಮತ್ತೆ ಬೆಂಗಳೂರಿನತ್ತ ಮುಖ ಮಾಡಿದ್ದರು. ರೈಲು ಹಠಾತ್ತಾಗಿ ಮಾರ್ಗಮಧ್ಯೆ ನಿಂತಿರುವ ಕಾರಣ, ಕಚೇರಿಗಳಿಗೆ ತೆರಳಬೇಕಿದ್ದ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ತೀವ್ರ ತೊಂದರೆಗೆ ಸಿಲುಕಿದ್ದಾರೆ. ನಿಗದಿತ ಸಮಯಕ್ಕೆ ತಲುಪಲಾಗದೆ ಪ್ರಯಾಣಿಕರು ಕಂಗಾಲಾಗಿದ್ದಾರೆ.
ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಹಾಗೂ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಳಿಯ ಮೇಲಿರುವ ಮರವನ್ನು ತೆರವುಗೊಳಿಸುವ ಕಾರ್ಯಾಚರಣೆ ಸಾಗುತ್ತಿದ್ದು, ಸಂಪೂರ್ಣವಾಗಿ ಮರ ತೆರವು ಮಾಡಲು ಇನ್ನೂ ಕನಿಷ್ಠ ಒಂದು ಗಂಟೆ ಕಾಲಾವಕಾಶ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಡೀಸೆಲ್ ಎಂಜಿನ್ ವ್ಯವಸ್ಥೆ
ರೈಲಿಗೆ ಡಿಸೇಲ್ ಎಂಜಿನ್ ವ್ಯವಸ್ಥೆ ಮಾಡಲಾಗಿದೆ. ಡಿಸೇಲ್ ಇಂಜಿನ್ ಮೂಲಕ ಕುಂಸಿಯ ವರೆಗೂ ರೈಲು ಬರಲಿದೆ. ಬಳಿಕ ವಿದ್ಯುತ್ ಸಂಪರ್ಕದಿಂದ ಪುನಃ ರೈಲು ಸಂಚಾರಿಸಲಿದೆ.
Laxmi News 24×7