ಗಣೇಶ ಹಬ್ಬದಲ್ಲಿ ಗಣೇಶನ ಪೂಜೆಗಿಂತ ಮೊದಲು ತಾಯಿ ಗೌರಿಯ ಪೂಜೆ ಮಾಡಲಾಗುತ್ತದೆ. ಹೆಣ್ಣುಮಕ್ಕಳು ಗೌರಿಯ ಮೂರ್ತಿಯನ್ನು ಅಲಂಕರಿಸಿ ಪೂಜಿಸುವುದು ವಾಡಿಕೆ. ಗೌರಿಯ ಪೂಜೆಗೆ ವಿಶೇಷವಾಗಿ ಗೌರಿ ಹೂವು ಬೇಕೇ ಬೇಕು.
ಕಾಡಿನಲ್ಲಿ ಬೆಳೆಯುವ ಗೌರಿ ಹೂವನ್ನು ( ಹಿರಿಯರು ಮನೆಗೆ ತರುತ್ತಾರೆ. ಎತ್ತರಕ್ಕೆ ಎಲ್ಲೆಲ್ಲೋ ಬೆಳೆಯುವ ಗೌರಿ ಹೂವು ನೋಡಲು ಬಲು ಸುಂದರವಾಗಿರುತ್ತದೆ. ಆದರೆ ಕೈಗೆಟುಕದಂತಿರುತ್ತದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಬೆಳೆಯುವ ಈ ಗಿಡದಲ್ಲಿ ಮಳೆಗಾಲದ ಅಗಸ್ಟ್-ಸೆಪ್ಟಂಬರ್, ಅಂದರೆ ಶ್ರಾವಣ-ಭಾದ್ರಪದ ಮಾಸದಲ್ಲಿ ಹೂವು ಬಿಡುತ್ತದೆ. ಕೆಂಪು ಬಣ್ಣದ ಈ ಹೂವು ಬೆಂಕಿಯ ಕೆನ್ನಾಲಗೆಯ ರೂಪದಲ್ಲೇ ಇರುತ್ತದೆ. ಆದ್ದರಿಂದ ಈ ಹೂವಿಗೆ ಅಗ್ನಿಶಿಖೆ ಎಂದು ಸಹ ಕರೆಯಲಾಗುತ್ತದೆ.
ತುಳುನಾಡಿನಲ್ಲಿ ಗಣೇಶ ಚತುರ್ಥಿಯ ಸಮಯದಲ್ಲಿ ಮಣ್ಣಿನ ಮೂರ್ತಿ ಪೂಜೆಗೆ ಈ ದೈತ್ಯ ಬಳ್ಳಿಯ ಹೂವನ್ನು ಇಡುವುದು ಸಂಪ್ರದಾಯವಾಗಿದೆ. ಅಲ್ಲಿ ಇದನ್ನು ‘ಗೌರಿ ಪೂ’ ಎನ್ನುತ್ತಾರೆ. ಕೊಡಗಿನ ಸಾಂಪ್ರದಾಯಿಕ ‘ಕೈಲ್ಪೋಲ್ದ್’ ಹಬ್ಬದಲ್ಲೂ ಆಯುಧಗಳ ಪೂಜೆಗೆ ಇದನ್ನು ಬಳಸಲಾಗುತ್ತದೆ.
ಗೌರಿ ಪೂಜೆಯ ವಿಶೇಷತೆ
ಗಣೇಶ ಚತುರ್ಥಿ ಹಬ್ಬದ ಮುನ್ನಾ ದಿನವೇ ಗೌರಿ ಮೂರ್ತಿಯನ್ನು ತಂದು ಪೂಜೆಗೆ ಸಿದ್ಧ ಮಾಡಲಾಗುತ್ತದೆ. (ಹಳ್ಳಿಯ ಕಡೆಗಳಲ್ಲಿ ತುಂಬಿದ ಕಲಶದಲ್ಲಿ ನೀರು ತುಂಬಿ ಆರಾಧಿಸುತ್ತಾರೆ) ಗಣೇಶನನ್ನು ಮನೆಗೆ ತಂದು ಪೂಜೆ ಮಾಡಿದಾಗ ಸಕಾರಾತ್ಮಕ ಶಕ್ತಿ ಹೆಚ್ಚುವುದು. ಅವುಗಳಿಂದ ಉಂಟಾಗುವ ಆವರ್ತನಗಳನ್ನು ತಾಯಿ ಗೌರಿ ಮಾತ್ರ ನಿಯಂತ್ರಿಸಲು ಸಾಧ್ಯ. ಹಾಗಾಗಿ ಗಣೇಶ ಹಬ್ಬದ ಮುನ್ನಾ ದಿನ ಗೌರಿ ದೇವಿಯನ್ನು ತಂದು ಪೂಜೆ ಮಾಡಲಾಗುತ್ತದೆ.
ಗೌರಿಗೆ ಅಲಂಕಾರ
ಮಂಗಳ ಗೌರಿಗೆ ಹೊಸ ಸೀರೆ ಅಥವಾ ಬಟ್ಟೆಯಿಂದ ಸಿಂಗರಿಸಿ, ಕೈಬಳೆ, ಬಂಗಾರದ ಸರಗಳನ್ನು ತೊಡಿಸುತ್ತಾರೆ. ನಂತರ ಪರಿಮಳದ ಹೂವುಗಳಿಂದ ಸುಂದರವಾಗಿ ಅಲಂಕಾರ ಮಾಡಲಾಗುತ್ತದೆ. ಅರಿಶಿನ ಕುಂಕುಮವು ಅವಳಿಗೆ ಪ್ರಿಯವಾದ ವಸ್ತುವಾಗಿರುವುದರಿಂದ ಅರಿಶಿನ ಕುಂಕುಮವನ್ನು ಇಡುವುದರ ಮೂಲಕ ಅಲಂಕಾರ ಮಾಡಲಾಗುತ್ತದೆ.
Laxmi News 24×7