ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಸೆಪ್ಟಂಬರ್ 27ರಂದು ಬೆಳಗ್ಗೆ 6 ರಿಂದ ರಾತ್ರಿ 12 ಗಂಟೆಯವರೆಗೆ ಅಂದರೆ ಬರೋಬ್ಬರಿ 18 ಗಂಟೆಗಳ ಕಾಲ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದಾಗಿ ವಿಷ್ಣುಸೇನಾ ಸಮಿತಿಯ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ.
ಸುಮಾರು ಒಂದು ಕೋಟಿಗೂ ಮಿಗಿಲಾದ ವೆಚ್ಚದಲ್ಲಿ, ಬರೋಬ್ಬರಿ 18 ಗಂಟೆಗಳ ಕಾಲ ನಡೆಯಲಿರುವ ಈ ಬೃಹತ್ ಮಹೋತ್ಸವಕ್ಕೆ ಈಗಾಗಲೇ ಸಿದ್ಧತೆಗಳು ಆರಂಭವಾಗಿವೆ. ನೂರಾರು ಜನರ ಶ್ರಮ, ಸಾವಿರಾರು ಅಭಿಮಾನಿಗಳ ಸಹಕಾರ ಹಾಗೂ ತಿಂಗಳುಗಳ ಪೂರ್ವತಯಾರಿಯೊಂದಿಗೆ ಈ ಮಹೋತ್ಸವವನ್ನು ಅತ್ಯಂತ ಅದ್ಧೂರಿಯಾಗಿ ರೂಪಿಸಲಾಗುತ್ತಿದೆ.
ಮಹೋತ್ಸವದ ಮೊದಲ ಪ್ರಮುಖ ಆಕರ್ಷಣೆಯಾಗಿ ಅರ್ಧ ಕಿಲೋಮೀಟರ್ ಉದ್ದದ ಬೃಹತ್ ಧ್ವಜದ ಮೆರವಣಿಗೆ ನಡೆಯಲಿದೆ. ಸೆಪ್ಟೆಂಬರ್ 27ರಂದು ಬೆಳಗ್ಗೆ 6 ಗಂಟೆಗೆ ಬೆಂಗಳೂರಿನ ಟೌನ್ ಹಾಲ್ನಿಂದ ಆರಂಭವಾಗುವ ಮೆರವಣಿಗೆ ನಾಯಂಡಹಳ್ಳಿಯವರೆಗೆ ಸಾಗಲಿದೆ. ಅರ್ಧ ಕಿಲೋಮೀಟರ್ ಉದ್ದದ ಬೃಹತ್ ಧ್ವಜವನ್ನು ಸಾವಿರಾರು ವಿಷ್ಣುವರ್ಧನ್ ಅಭಿಮಾನಿಗಳು ಹೆಮ್ಮೆಯಿಂದ ಹೊತ್ತು ಸಾಗಲಿದ್ದಾರೆ. ಇದು ಅಮೃತ ಮಹೋತ್ಸವದ ಅತ್ಯಂತ ವಿಶೇಷ ಹಾಗೂ ಸ್ಮರಣೀಯ ಕ್ಷಣಗಳಲ್ಲಿ ಒಂದಾಗಲಿದೆ.
ಮೆರವಣಿಗೆಯ ನಂತರ ನಾಯಂಡಹಳ್ಳಿಯ ನಂದಿ ಲಿಂಕ್ ಗ್ರೌಂಡ್ನಲ್ಲಿ ದಿನವಿಡೀ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಬೆಳಗ್ಗೆ 6 ಗಂಟೆಗೆ ಆರಂಭವಾಗುವ ಸಂಭ್ರಮ ರಾತ್ರಿ 12 ಗಂಟೆಯವರೆಗೂ ಮುಂದುವರಿಯಲಿದೆ. ಆ ದಿನ ವಿಷ್ಣು ಸೇನಾನಿಗಳು ಕೇವಲ ಒಂದು ಕಾರ್ಯಕ್ರಮವನ್ನು ಮಾಡುವುದಿಲ್ಲ. ಒಬ್ಬ ಮಹಾನ್ ಕಲಾವಿದನ ಮೇಲಿನ ಅಭಿಮಾನ ಹೇಗಿರುತ್ತದೆ ಎಂಬುದನ್ನು ಇಡೀ ನಾಡಿಗೆ ತೋರಿಸಲಿದ್ದಾರೆ. ಈ ಅಮೃತ ಮಹೋತ್ಸವ ಅಭಿಮಾನಿಗಳ ಪಾಲಿಗೆ ಒಂದು ಐತಿಹಾಸಿಕ ಕ್ಷಣವಾಗಬೇಕು ಎಂಬ ಕನಸಿನಿಂದ ಪ್ರತಿಯೊಂದು ಹೆಜ್ಜೆಯನ್ನೂ ರೂಪಿಸುತ್ತಿದ್ದೇವೆ” ಎಂದು ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಭಾರತೀಯ ಸಿನಿಮಾ ರಂಗದ ಅನೇಕ ಗಣ್ಯರು ಹಾಜರಾಗಲಿದ್ದು, ಈಗಾಗಲೇ ವೀರಕಪುತ್ರ ಶ್ರೀನಿವಾಸ್ ಅವರು ಬಹುಭಾಷಾ ಖ್ಯಾತ ನಟಿ ರೋಜಾ, ಸುಹಾಸಿನಿ ಸೇರಿದಂತೆ ಅನೇಕ ಕಲಾವಿದರ ಮನೆಗೆ ಹೋಗಿ ಆಹ್ವಾನ ನೀಡಿದ್ದಾರೆ. ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಹಿರಿಯ ನಿರ್ದೇಶಕ ಡಾ. ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಹಾಗೂ ವೀರಕಪುತ್ರ ಶ್ರೀನಿವಾಸ ಅವರು ರೋಜಾ ಹಾಗೂ ಸುಹಾಸಿನಿ ಅವರ ನಿವಾಸಕ್ಕೆ ಭೇಟಿ ನೀಡಿ, ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಆಹ್ವಾನಿಸಿ ಪ್ರೀತಿಯ ಸ್ವಾಗತ ಕೋರಿದರು.
ಈ ಭೇಟಿಯ ವೇಳೆ ಆಹ್ವಾನ ಪತ್ರಿಕೆಯ ಮೇಲಿದ್ದ ಡಾ. ವಿಷ್ಣುವರ್ಧನ್ ಅವರ ಭಾವಚಿತ್ರವನ್ನು ನೋಡಿದ ತಕ್ಷಣ ರೋಜಾ ಅವರ ಬಾಯಿಂದ ಬಂದ ಮೊದಲ ಪದ ʻಲೆಜೆಂಡ್ʼ. ಬಳಿಕ ವಿಷ್ಣುವರ್ಧನ್ ಅವರ ವ್ಯಕ್ತಿತ್ವ, ಚಿತ್ರರಂಗದ ಸಾಧನೆ ಹಾಗೂ ಅವರೊಂದಿಗಿನ ನೆನಪುಗಳ ಕುರಿತು ರೋಜಾ ಅವರು ಅಪಾರ ಪ್ರೀತಿಯಿಂದ ಮಾತನಾಡಿದರು. ಯಜಮಾನ್ರ ಫೋಟೋ ನೋಡಿದ ತಕ್ಷಣ ಅವರ ಬಾಯಿಂದ ಬಂದ ಮೊದಲ ಪದ ‘ಲೆಜೆಂಡ್’. ಆಮೇಲೆ ಅದೆಷ್ಟು ಪ್ರೀತಿಯಿಂದ ಮಾತನಾಡಿದ್ರು ಗೊತ್ತಾ… ಅದನ್ನೆಲ್ಲ ಈಗಲೇ ಹೇಳುವುದಿಲ್ಲ. ಅಮೃತ ಮಹೋತ್ಸವದ ವೇದಿಕೆಯಲ್ಲೇ ಅವರ ಮಾತುಗಳಲ್ಲಿ ಕೇಳೋಣ, ಎಂದಿದ್ದಾರೆ ವೀರಕಪುತ್ರ ಶ್ರೀನಿವಾಸ ತಿಳಿಸಿದ್ದಾರೆ.
ಡಾ. ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವವನ್ನು ಐತಿಹಾಸಿಕವಾಗಿ ಆಚರಿಸಲು ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಚಿತ್ರರಂಗದ ಹಲವು ಗಣ್ಯರು ಹಾಗೂ ವಿಷ್ಣುವರ್ಧನ್ ಅವರೊಂದಿಗೆ ಒಡನಾಟ ಹೊಂದಿದ್ದ ಕಲಾವಿದರು ಈ ಮಹೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ.
Laxmi News 24×7