ಮೈಸೂರು: ಆಷಾಢ ಮಾಸದ 3ನೇ ಶುಕ್ರವಾರವಾದ ಇಂದು ನಾಡದೇವತೆ ತಾಯಿ ಚಾಮುಂಡಿ ಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ.
ಆಷಾಢ ಶುಕ್ರವಾರ ಹಿನ್ನೆಲೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಸಹಸ್ರಾರು ಸಂಖ್ಯೆಯ ಭಕ್ತರು ಹರಿದುಬಂದಿದ್ದಾರೆ. ಬ್ರಾಹ್ಮಿ ಮುಹೂರ್ತದಿಂದಲೇ ಕೆಲ ಭಕ್ತರು ರಸ್ತೆ ಮಾರ್ಗವಾಗಿ ಬಂದ್ರೆ, ಇನ್ನೂ ಕೆಲವರು ಮೆಟ್ಟಿಲುಗಳ ಮಾರ್ಗವಾಗಿ ಬಂದು ತಾಯಿ ಚಾಮುಂಡಿಯ ದರ್ಶನ ಪಡೆಯುತ್ತಿದ್ದಾರೆ.
3ನೇ ಆಷಾಢ ಶುಕ್ರವಾರವಾದ ಇಂದು ತಾಯಿ ಚಾಮುಂಡಿಗೆ ಲಕ್ಷ್ಮಿ ದೇವಿಯ ಅಲಂಕಾರ ಮಾಡಲಾಗಿದೆ. ಇದರೊಂದಿಗೆ ಇಡೀ ದೇವಸ್ಥಾನದ ಒಳಾಂಗಣವನ್ನ ಚೆಂಡು ಹೂ, ಕಮಲ ಸೇರಿದಂತೆ ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಗಿದೆ. ಕಿತ್ತಳೆ, ಮಾವು ಸೇರಿದಂತೆ ಹಲವು ಬಗೆಯ ಹಣ್ಣುಗಳನ್ನೂ ವಿಶೇಷ ಅಲಂಕಾರಕ್ಕೆ ಬಳಸಲಾಗಿದೆ.
ದೇವಸ್ಥಾನದ ಒಳಾಂಗಣ ಕರ್ಪೂರ, ಗಂಧ, ಧೂಪದ ಗಮಲಿನಿಂದ ಕೂಡಿದ್ದು, ಬೆಳಗ್ಗೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ತಾಯಿಯ ದರ್ಶನ ಪಡೆಯುತ್ತಿದ್ದಾರೆ.
ಇನ್ನು ಆಷಾಢ ಮಾಸದ ಮೊದಲ ಶುಕ್ರವಾರದಂದು ತಾಯಿ ಚಾಮುಂಡಿಗೆ ನಾಗಲಕ್ಷ್ಮೀ, 2ನೇ ಶುಕ್ರವಾರದಂದು ಲಕ್ಷ್ಮಿ ಅಲಂಕಾರ ಮಾಡಲಾಗಿತ್ತು. ಈ ಬಾರಿಯೂ ಲಕ್ಷ್ಮಿ ದೇವಿಯ ಅಲಂಕಾರ ಮಾಡಲಾಗಿದೆ. 2 ಸಾವಿರ ರೂ. ಮೌಲ್ಯದ ಟಿಕೆಟ್ ಪಡೆದವರಿಗೆ ನೇರ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಅಭಿಷೇಕ, ಕುಂಕುಮಾರ್ಚನೆ, ಮಹಾಮಂಗಳಾರತಿ ಬಳಿಕ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಮುಂಜಾನೆ 5:30 ರಿಂದ ಬೆಳಗ್ಗೆ 10 ಗಂಟೆಯವರೆಗೆ ವಿವಿಐಪಿಗಳಿಗೆ ದರ್ಶನಕ್ಕೆ ಅವಕಾಶವಿದೆ.
Laxmi News 24×7